ರಾಮನ ಮಂದಿರ ನಿರ್ಮಾಣಕ್ಕೆ ಸುಮುಹೂರ್ತ ಕೂಡಿ ಬಂದಿರುವುದು ಮಹಾಭಾಗ್ಯ, ತಮಿಳು ನೆಲದಲ್ಲಿ ರಾಮಾಯಣದ ಹೆಜ್ಜೆಗುರುತು: ಪೇಜಾವರ ಶ್ರೀ -Vishwanews24

Featured, ಉಡುಪಿ

ರಾಮನ ಮಂದಿರ ನಿರ್ಮಾಣಕ್ಕೆ ಸುಮುಹೂರ್ತ ಕೂಡಿ ಬಂದಿರುವುದು ಮಹಾಭಾಗ್ಯ, ತಮಿಳು ನೆಲದಲ್ಲಿ ರಾಮಾಯಣದ ಹೆಜ್ಜೆಗುರುತು: ಪೇಜಾವರ ಶ್ರೀ -Vishwanews24

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸ್ಥಳವು ಮರಳು ಮಿಶ್ರಿತ ಜೌಗುಮಣ್ಣಿನದಾಗಿದ್ದು ಮಂದಿರಕ್ಕೆ ಭವಿಷ್ಯದಲ್ಲಿ ಯಾವುದೇ ಹಾನಿಯಾಗಬಾರದು ಎಂಬ ದೃಷ್ಟಿಯಿಂದ ಭೂಮಿಯ ಧಾರಣ ಸಾಮರ್ಥ್ಯ ಅಧ್ಯಯನ ನಡೆಯುತ್ತಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಚೆನ್ನೈನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಮಂದಿರ ನಿರ್ಮಾಣದ ಉಸ್ತುವಾರಿಯನ್ನು ಎಲ್‌ ಅಂಡ್ ಟಿ ಕಂಪೆನಿಗೆ ವಹಿಸಲಾಗಿದೆ. ಜ.15ರಿಂದ ಫೆ.27ರವರೆಗೆ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಣಾ ಅಭಿಯಾನ ನಡೆಯಲಿದೆ. ₹ 1,400 ಕೋಟಿ ಅಂದಾಜು ವೆಚ್ಚದಲ್ಲಿ ಮಂದಿರ ನಿರ್ಮಾಣವಾಗಲಿದೆ ಎಂದರು.

ಧನ ಸಂಗ್ರಹ ಜವಾಬ್ದಾರಿಯನ್ನು ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್‌ಗೆ ವಹಿಸಲಾಗಿದ್ದು, ಜಿಲ್ಲಾವಾರು ಸಮಿತಿ ರಚಿಸಿ ಸಮಾಜದ ಎಲ್ಲ ಸ್ತರದ ಜನರಿಂದ ದೇಣಿಗೆ ಪಡೆಯುವ ಉದ್ದೇಶವಿದೆ. ಧನ‌ಸಂಗ್ರಹ ಹಾಗೂ ವಿನಿಯೋಗದಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗಿದೆ ಎಂದರು.

ದೇಶದ ಕೋಟ್ಯಂತರ ಹಿಂದೂಗಳ ಹೋರಾಟ, ಪ್ರಾಣಾರ್ಪಣೆ, ಸುದೀರ್ಘ ನ್ಯಾಯಾಂಗ ವ್ಯಾಜ್ಯದ ಬಳಿಕ ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣಕ್ಕೆ ಸುಮುಹೂರ್ತ ಕೂಡಿ ಬಂದಿರುವುದು ಮಹಾಭಾಗ್ಯ. ರಾಮಮಂದಿರ ನಿರ್ಮಾಣ ಆಂದೋಲನದಲ್ಲಿ ವಿಶ್ವೇಶ ತೀರ್ಥ ಶ್ರೀಗಳು ಸಕ್ರಿಯವಾಗಿ ಪಾಲ್ಗೊಂಡು‌ ಮಾರ್ಗದರ್ಶನ ನೀಡಿದ್ದರು. ಅದರ ಫಲವಾಗಿ ಟ್ರಸ್ಟ್‌ನಲ್ಲಿ ವಿಶ್ವಸ್ಥರಾಗಿ ಕಾರ್ಯನಿರ್ವಹಿಸುವ ಅವಕಾಶ ಒಲಿದು ಬಂದಿದೆ ಎಂದರು.

ತಮಿಳು ನೆಲ, ಭಾಷೆ ಸಂಸ್ಕೃತಿಯಲ್ಲೂ ರಾಮಾಯಣದ ಸಂದೇಶ ಹಾಗೂ ಮೌಲ್ಯಗಳು ಸಮೃದ್ಧವಾಗಿವೆ. ಭರತನಾಟ್ಯದಂಥ ಶಿಷ್ಟ ಕಲೆ ಹಾಗೂ ಇಲ್ಲಿನ ಜನಪದೀಯ ಸಂಸ್ಕೃತಿಯಲ್ಲೂ ರಾಮಾಯಣದ ಹೆಗ್ಗುರುತುಗಳು ಕಾಣಿಸುತ್ತಿವೆ. ಧನುಷ್ಕೋಟಿ, ರಾಮಸೇತು, ರಾಮೇಶ್ವರದಂಥಹ ಪವಿತ್ರ ಸ್ಥಳಗಳು ತಮಿಳುನಾಡಿನಲ್ಲಿರುವುದು ರಾಮಾಯಣದೊಂದಿಗಿನ ನಂಟಿಗೆ ಸಾಕ್ಷಿ ಎಂದು ಪೇಜಾವರ ಶ್ರೀಗಳು ಹೇಳಿದರು.