ರಾಮ ಮಂದಿರವನ್ನು ಕಟ್ಟೇ ಕಟ್ಟುತ್ತೇವೆ. ಇದು ಸ್ವಾಭಿಮಾನದ ಸಂಕೇತ’ : ಕೆ.ಎಸ್.ಈಶ್ವರಪ್ಪ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ‘ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭೇಟಿ ಮಾಡಿದ ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ಆಸೆಯಿದೆ ಎಂದಿದ್ದರು. ಆದರೆ, ಕ್ಷೇತ್ರದಲ್ಲಿ 50 ಸಾವಿರ ಮುಸ್ಲಿಂ ಮತಗಳಿದ್ದು, ಅದನ್ನು ಕಳೆದುಕೊಂಡರೆ ಸೋಲುತ್ತೇವೆ ಎನ್ನುವುದು ಅವರ ಅಳಲಾಗಿತ್ತು. ಈ ರೀತಿಯ ಹಿಜಡಾತನ ಕೆಲವರಲ್ಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮ ಸೇನೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘370ನೇ ವಿಧಿ ರದ್ದತಿಗಾಗಿ ಪ್ರಧಾನಿಗೆ ಅಭಿನಂದನೆ’ ಸಮಾರಂಭದಲ್ಲಿ ಮಾತನಾಡಿದರು.

‘370ನೇ ವಿಧಿ, ತ್ರಿವಳಿ ತಲಾಖ್ ರದ್ದತಿಗೆ ಇಡೀ ರಾಷ್ಟ್ರ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಅಖಂಡ ಭಾರತ ನಿರ್ಮಾಣವಾಗಬೇಕೆಂಬ ಆಸೆಯಿದೆ. ಆದರೆ, ಇನ್ನೂ ಕೆಲವರು ಮುಸ್ಲಿಮರ ಮತಗಳನ್ನೇ ನಂಬಿಕೊಂಡಿದ್ದಾರೆ. ನನ್ನ ಕ್ಷೇತ್ರದಲ್ಲಿ 8 ಸಾವಿರದಿಂದ 9 ಸಾವಿರ ಕುರುಬರ ಮತವಿದೆ. ಅದೇ ಮುಸ್ಲಿಮರ ಮತ 50 ಸಾವಿರದಿಂದ 60 ಸಾವಿರವಿದೆ. ಆದರೆ, ಇದೂವರೆಗೂ ಒಬ್ಬ ಮುಸ್ಲಿಮನಿಗೂ ನಮಸ್ಕಾರ ಹೊಡೆದು ಮತ ಕೇಳಿಲ್ಲ. ಅದಾಗಿಯೂ 47 ಸಾವಿರ ಮತಗಳ ಅಂತರದಿಂದ ಗೆದ್ದಿರುವೆ. ರಾಷ್ಟ್ರ ಭಕ್ತಿ ಹೊಂದಿರುವ ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಾರೆ. ಯಾರಿಗೆ ಪಾಕಿಸ್ತಾನದ ಪರ ಒಲವಿದೆಯೋ ಅವರು ಮತ ಹಾಕಲು ಹಿಂದೇಟು ಹಾಕುತ್ತಾರೆ’ ಎಂದರು.

‘ಹಿಂದೆ ನಾವು ಅಧಿಕಾರದಲ್ಲಿದ್ದಾಗ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿದ್ದೇವು. ಆದರೆ, ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಕಾನೂನು ರದ್ದು ಮಾಡಿತು. ಇದೀಗ ನಮ್ಮ ಸರ್ಕಾರ ಗೋವಿನ ಸಂತತಿ ಉಳಿವಿಗಾಗಿ ಕಾನೂನು ಜಾರಿ ಮಾಡಲಿದೆ’ ಎಂದರು.

‘ಈ ದೇಶದ ಹಿಂದೂಗಳು ನಪುಂಸಕರಲ್ಲ. ರಾಮ ಮಂದಿರದ ವಿಚಾರವಾಗಿ ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿ, ತಾತ್ಕಾಲಿಕವಾಗಿ ರಾಮ್ ಲೀಲಾ ಮಂದಿರ ಕಟ್ಟಲಾಗಿದೆ. ಇಲ್ಲಿ ರಾಮ ಮಂದಿರವನ್ನು ಕಟ್ಟೇ ಕಟ್ಟುತ್ತೇವೆ. ಇದು ಸ್ವಾಭಿಮಾನದ ಸಂಕೇತ’ ಎಂದರು.