ರೇಖಾ ಕದಿರೇಶ್ ಹತ್ಯೆ ಪ್ರಕರಣ: ಆದಷ್ಟು ಬೇಗ ಸತ್ಯ ಹೊರಬರಲಿದೆ : ಬಸವರಾಜ ಬೊಮ್ಮಾಯಿ -Vishwanews24

Featured, ರಾಜ್ಯ ನ್ಯೂಸ್

ರೇಖಾ ಕದಿರೇಶ್ ಹತ್ಯೆ ಪ್ರಕರಣ: ಆದಷ್ಟು ಬೇಗ ಸತ್ಯ ಹೊರಬರಲಿದೆ : ಬಸವರಾಜ ಬೊಮ್ಮಾಯಿ -Vishwanews24

ಬೆಂಗಳೂರು: ಮಾಜಿ ಬಿಬಿಎಂಪಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಹಲವು ಹಿನ್ನೆಲೆಗಳಿದ್ದು ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಹತ್ಯೆಗೆ ಹಲವಾರು ಹಿನ್ನೆಲೆಗಳಿವೆ. ಈ ಹಿಂದೆ ಅವರ ಪತಿಯ ಹತ್ಯೆ ಆಗಿತ್ತು, ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಸಾಕಷ್ಟು ವಿಷಯಗಳು ಹೊರ ಬರುತ್ತಿವೆ. ಆರೋಪಿಗಳನ್ನು ಬಂಧನವೂ ನಡೆಯುತ್ತಿದ್ದು ಶೀಘ್ರದಲ್ಲೇ ಸತ್ಯ ಹೊರಬರುತ್ತದೆ ಎಂದು ತಿಳಿಸಿದರು.

ಹಾಡಹಗಲೆ ಕೊಲೆ ನಡೆದಿದ್ದರಿಂದ ಪೊಲೀಸರು ತನಿಖೆ ಮಾಡುವಾಗ ಹಲವು ವಿಚಾರ ಗೊತ್ತಾಗಿದೆ. ರಾಜಕೀಯ ಕಾರಣವೋ ಕೌಟುಂಬಿಕ ಕಾರಣವೋ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗುತ್ತದೆ, ಶೀಘ್ರದಲ್ಲೇ ಗೊತ್ತಾಗಲಿದೆ ಎಂದರು.

ಗುರುವಾರ ಬೆಳಗ್ಗೆ ರೇಖಾ ಕದಿರೇಶ್ ಅವರ ಹತ್ಯೆ ನಡೆದಿತ್ತು. ಮೂವರ ತಂಡ ಈ ಕೃತ್ಯ ಎಸಗಿತ್ತು. ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನುಳಿದ ಇಬ್ಬರು ಪ್ರಮುಖ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

2018 ರಲ್ಲಿ ರೇಖಾ ಕದಿರೇಶ್ ಅವರ ಪತಿ ಕದಿರೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಅದೇ ಆರೋಪಿಗಳು ಇದೀಗ ಈ ಕೃತ್ಯವನ್ನು ಭಾಗಿಯಾಗಿರುವ ಸಾಧ್ಯತೆ ಇದೆ. ಹತ್ಯೆಗೆ ವೈಯಕ್ತಿಕ ಕಾರಣ ಅಥವಾ ಹಣಕಾಸು ವ್ಯವಹಾರ ಕಾರಣವೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಅಲ್ಲದೆ ರಾಜಕೀಯ ಕಾರಣ ಇದರ ಹಿಂದೆ ಇದ್ಯಾ ಎಂಬ ಆಯಾಮದಲ್ಲೂ ಪೊಲೀಸರಿಂದ ತನಿಖೆ ನಡೆಯುತ್ತಿದೆ.