ವಾರಾಣಸಿಯಿಂದ ಸ್ಪರ್ಧಿಸಲಿದ್ದಾರೆ ಪ್ರಧಾನಿ ಮೋದಿ – Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ: ಲೋಕಸಭೆ ಚುನಾವಣೆ ಮೊದಲ ಹಂತದ ನಾಮಪತ್ರ ಸಲ್ಲಿಸಲು ಕೆಲವೇ ದಿನಗಳಿರುವಾಗ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ಸ್ಪರ್ಧಿಸಲಿದ್ದಾರೆ.

ಪಟ್ಟಿಯಲ್ಲಿನ ಮಹತ್ವಪೂರ್ಣ ಬದಲಾವಣೆ ಎಂದರೆ ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಹಾಲಿ ಸಂಸದ ಎಲ್‌.ಕೆ.ಆಡ್ವಾಣಿ ಸ್ಥಾನದಲ್ಲಿ ಬಿಜೆಪಿ ಅಧ್ಯಕ್ಷ ಅಧ್ಯಕ್ಷ ಅಮಿತ್‌ ಷಾ ಸ್ಪರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯ ಎದುರು ಅಮೇಥಿಯಲ್ಲಿ ಸ್ಮತಿ ಇರಾನಿ ಸ್ಪರ್ಧಿಸಲಿದ್ದಾರೆ.

2014ರಲ್ಲೂ ಸ್ಮತಿ ಸ್ಪರ್ಧಿಸಿದ್ದರಾದರೂ, ಸೋಲು ಅನುಭವಿಸಿದ್ದರು. ಲಕ್ನೋದಿಂದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಪುನರಾಯ್ಕೆ ಬಯಸಲಿದ್ದಾರೆ.  ಒಟ್ಟು 20 ರಾಜ್ಯಗಳ 182 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಮುಖಂಡ ಜೆ.ಪಿನಡ್ಡಾ  ಬಿಡುಗಡೆ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿವಾದಾತ್ಮಕ ಸಂಸದ ಸಾಕ್ಷಿ ಮಹಾರಾಜ್‌ರನ್ನು ಉನ್ನಾವ್‌ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಪಶ್ಚಿಮ ಬಂಗಾಳದ 42 ಕ್ಷೇತ್ರಗಳಲ್ಲಿ 22ರಲ್ಲಿ ಗೆಲ್ಲುವ ಗುರಿ ಹಾಕಿಕೊಂಡಿರುವ ಬಿಜೆಪಿ ಅಸಾನ್‌ಸೋಲ್‌ನಿಂದ ಹಾಲಿ ಸಂಸದ, ಕೇಂದ್ರ ಸಚಿವ  ಬಾಬುಲ್‌ ಸುಪ್ರಿಯೋಗೆ ಟಿಕೆಟ್‌ ನೀಡಿದೆ. ಅಲ್ಲದೆ ಕೆಲವೇ ದಿನಗಳ ಹಿಂದೆ ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಅನುಪಮ್‌ ಹಜ್ರಾಗೆ ಜಾದವ್‌ಪುರ ಟಿಕೆಟ್‌ ನೀಡಲಾಗಿದೆ.

ಕೇರಳದಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್‌ ಹಾಲಿ ಸಂಸದ ಶಶಿ ತರೂರ್‌ ವಿರುದ್ಧ ತಿರುವನಂತಪುರದಲ್ಲಿ ಕುಮ್ಮನಂ ರಾಜಶೇಖರನ್‌ರನ್ನು ಕಣಕ್ಕಿಳಿಸಿದೆ. ರಾಜಶೇಖರನ್‌ ಇತ್ತೀಚೆಗಷ್ಟೇ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ವಾಪಸಾಗಿದ್ದರು. ಇನ್ನು ಕಾಸರಗೋಡಿನಲ್ಲಿ  ಬಿಜೆಪಿ ನಾಯಕ ರವೀಶ ತಂತ್ರಿ ಕುಂಟಾರು ಅವರಿಗೆ ಟಿಕೆಟ್‌ ನೀಡಲಾಗಿದೆ. ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್‌ ರಿಜಿಜು ಅರುಣಾಚಲ ಪೂರ್ವದಿಂದ ಸ್ಪರ್ಧಿಸಲಿದ್ದಾರೆ. ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಪುತ್ರ ದುಶ್ಶಂತ್‌ 4ನೇ ಬಾರಿಗೆ ಸ್ಪರ್ಧಿಸಲಿದ್ದಾರೆ.