ವಿಪಕ್ಷಗಳ ಅಪಪ್ರಚಾರದಿಂದ ಸೋಲು: ಸೊರಕೆ

Featured, ಉಡುಪಿ

ಕುಂದಾಪುರ:  ನಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಈವರೆಗೆ ಆಗಿಲ್ಲ.ಬಿಜೆಪಿ ಭಾವನಾತ್ಮಕವಾಗಿ ಜನರ ಮನಸ್ಸನ್ನು ಗೆದ್ದಿದೆ  ವಿನಃ ಇತರ ವಿಚಾರದಲ್ಲಿ ಅಲ್ಲ  ಎಂದು ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಹೇಳಿದರು.  

ಅವರು ರವಿವಾರ ಇಲ್ಲಿನ ಹರಿಪ್ರಸಾದ್‌ ಹೊಟೇಲ್‌ನ ಅಕ್ಷತಾ ಸಭಾಂಗಣದಲ್ಲಿ  ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಆತ್ಮಾವಲೋಕನ ಸಭೆ 
ವಿಪಕ್ಷಗಳ ಅಪಪ್ರಚಾರದಿಂದಾಗಿ ಸೋಲನ್ನು ಅನುಭವಿಸ ಬೇಕಾಯಿತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಒತ್ತು ನೀಡಲು ಆತ್ಮಾವ ಲೋಕನ ಸಭೆ ನಡೆಸಲಾಗುತ್ತಿದೆ. ಪ್ರತೀ ರವಿವಾರ ಎರಡು ಬ್ಲಾಕ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಜತೆ ಸಭೆ ನಡೆಸಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ  ಮಾತನಾಡಿ, ಪೈಪ್‌ಲೈನ್‌ ಹಾದು ಹೋಗುವ ಗ್ರಾಮಗಳ ಜನತೆಗೆ ಕಚ್ಛಾ  ನೀರು ಕೊಟ್ಟು ಉಡುಪಿಗೆ ಮಾತ್ರ ಶುದ್ಧ ಕುಡಿಯುವ ನೀರು ಕೊಡುತ್ತೇವೆ ಎನ್ನುವ ವಾರಾಹಿ ಅಮೃತ್‌ ಯೋಜನೆ ಅಮಾನವೀಯ. ಉಡುಪಿಗೆ ನೀರು ಕೊಡುವುದಕ್ಕೆ ವಿರೋಧವಿಲ್ಲ. ಆದರೆ  ಪೈಪ್‌ಲೈನ್‌ಗಾಗಿ ಭೂಸ್ವಾಧೀನ ಮಾಡದೆ 38 ಕಿ.ಮೀ. ರಸ್ತೆಯನ್ನು ಅಗೆದು ಪೈಪ್‌ ಕೊಂಡೊಯ್ಯುತ್ತೇವೆ ಎನ್ನುವುದು ರಾಷ್ಟ್ರ ದ್ರೋಹಕ್ಕೆ ಸಮ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ್‌ ತೋನ್ಸೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಕಾರ್ಕಳ ಮಾಜಿ ಶಾಸಕ ಕೆ. ಗೋಪಾಲ್‌ ಭಂಡಾರಿ, ರಾಜ್ಯ ಇಂಟಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು, ಕೆಪಿಸಿಸಿ ಕಾರ್ಯದರ್ಶಿ ಮುರಳಿ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಸೇವಾದಳ ಅಧ್ಯಕ್ಷ ಅಶೋಕ್‌ ಕುಮಾರ್‌, ಹೆರಿಯಣ್ಣ, ಕಾಂಗ್ರೆಸ್‌ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಮಾಣಿ ಗೋಪಾಲ್‌ ಮೊದಲಾದವರು ಉಪಸ್ಥಿತರಿದ್ದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ  ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿ, ನಾರಾಯಣ ಆಚಾರ್ಯ ನಿರ್ವಹಿಸಿ, ವಂದಿಸಿದರು.