ವಿಶ್ವಕಪ್ ಕ್ರಿಕೆಟ್ : ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯ ಬಹಿಷ್ಕರಿಸಿದರೆ ಅದು ಯುದ್ಧವನ್ನು ಮಾಡದೆ ಸೊಲೊಪ್ಪಿಕೊಂಡಂತೆ: ಶಶಿತರೂರ್ – Vishwanews24
ನವದೆಹಲಿ: ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಗಳನ್ನು ಭಾರತ ತಂಡ ಬಹಿಷ್ಕರಿಸಿದರೆ, ಅದು ಯುದ್ಧವನ್ನೇ ಮಾಡದೆ ಸೊಲೊಪ್ಪಿಕೊಂಡಂತಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಶಶಿತರೂರ್ ಹೇಳಿದ್ದಾರೆ.
ದೇಶಾದ್ಯಂತ ಪುಲ್ವಾಮ ಉಗ್ರ ದಾಳಿ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡದೇ ಬಹಿಷ್ಕರಿಸಬೇಕು ಎಂಬ ಆಗ್ರಹಗಳೂ ಕೂಡ ಕೇಳಿಬರುತ್ತಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗರು, ರಾಜಕಾರಣಿಗಳು, ಪರ ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದು, ಈ ಪಟ್ಟಿಗೆ ಇದೀಗ ಕಾಂಗ್ರೆಸ್ ಮುಖಂಡ ಶಶಿತರೂರ್ ಅವರೂ ಕೂಡ ಸೇರಿದ್ದಾರೆ.
ಅವರ ಪ್ರಕಾರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು ಎದುರಿಸಿ ಹೀನಾಯವಾಗಿ ಸೋಲಿಸಬೇಕು. ಆ ಮೂಲಕ ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಕೆ ಮಾಡಬೇಕು ಎಂದು ಹೇಳಿದ್ದಾರೆ. ಇದು ಕೇವಲ 2 ಅಂಕಗಳ ವಿಚಾರವಲ್ಲ. ಬದಲಿಗೆ ಭಾರತದ ಗೌರವದ ಪ್ರಶ್ನೆಯಾಗಿದೆ. ಇದು ಯುದ್ಧವನ್ನೇ ಮಾಡದೇ ಸೋಲು ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದ್ದಾರೆ.

