ವಿಷ್ಣುವರ್ಧನ್ ಸ್ಮಾರಕ ಎಲ್ಲಿ ಮಾಡಲು ಹೋದರೂ ವಿವಾದ ಆಗ್ತಿದೆ ; ನಾವೆಲ್ಲರೂ ಅಸಹಾಯಕರು: ಜಯಮಾಲಾ
ಉಡುಪಿ : ವಿಷ್ಣುವರ್ಧನ್ ಸ್ಮಾರಕದ ವಿಚಾರದಲ್ಲಿ ಮುಖ್ಯಮಂತ್ರಿ ಸೇರಿದಂತೆ ನಮಗೆಲ್ಲರಿಗೂ ಅಸಹಾಯಕತೆ ಇದೆ. ವಿಷ್ಣುವರ್ಧನ್ ಸ್ಮಾರಕ ಮಾಡಲು ಎಲ್ಲಿ ಹೋದರೂ ವಿವಾದ ಆಗ್ತಾ ಇದೆ. ಯಾಕೆ ಅಂತ ಗೊತ್ತಾಗ್ತಿಲ್ಲ ಎಂದು ಸಚಿವೆ ಜಯಮಾಲಾ ತಿಳಿಸಿದ್ದಾರೆ.
ಉಡುಪಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಅಂದ್ರೆ ವಿಷ್ಣುವರ್ಧನ್ ಗೆ ಪ್ರಾಣ. ವಿಷ್ಣುವರ್ಧನ್ ಸ್ಮಾರಕ ವಿಳಂಬವಾಗುತ್ತಿರುವ ಬಗ್ಗೆ ಭಾರತಿ ಅವರ ಬೇಸರ ಸಹಜ. ವಿಷ್ಣುವರ್ಧನ್ ನಮ್ಮನ್ನಗಲಿ ಒಂಭತ್ತು ವರ್ಷ ಆಗಿದೆ. ಭಾರತಿ ಅವರ ಕುಟುಂಬ ಕ್ಕೆ ನಾನು ಬೆಲೆ ಕೊಡ್ತೇನೆ.
ವಿಷ್ಣು ಆಸೆ ಏನು ಅನ್ನೋದು ಅವರ ಕುಟುಂಬಕ್ಕೆ ನಮಗಿಂತ ಚೆನ್ನಾಗಿ ತಿಳಿದಿರುತ್ತೆ. ಹೀಗಾಗಿ ಮೈಸೂರಲ್ಲಿ ಸ್ಮಾರಕ ಆಗಲಿ ಅಂತ ಭಾರತಿ ಕೇಳುತ್ತಿದ್ದಾರೆ. ಸ್ಮಾರಕ ನಿರ್ಮಾಣ ವಿಚಾರದಲ್ಲಿ ಭಾರತಿ ಅವರ ಬೇಸರ ಸಹಜ. ಹೀಗಾಗಿ ಕುಟುಂಬದ ಮಾತಿಗೆ ಬೆಲೆ ಕೊಡಬೇಕಾಗುತ್ತದೆ ಎಂದರು.
ಸಿಎಂ ಕುಮಾರಸ್ವಾಮಿ ಯವರು ಕೂಡಾ ಸಿನೆಮಾ ರಂಗದವರೇ ಹಾಗಾಗಿ ಭಾರತಿ ಹಾಗೂ ಮುಖ್ಯಮಂತ್ರಿಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಬರಲ್ಲ. ಭೂಮಿಗೆ ಸಂಬಂದಪಟ್ಟು ಸಣ್ಣ ತಕರಾರು ಇದೆ ಅನಿಸುತ್ತೆ. ವಿಷ್ಣು ಸಮಾಧಿ ವಿಚಾರದಲ್ಲಿ ನಮಗೆಲ್ಲರಿಗೂ ಅಸಹಾಯಕತೆ ಇದೆ. ನಾವೆಲ್ಲರೂ ಭಾರತಿ ಅವರ ಪರ ನಿಲ್ತೀವಿ ಎಂದು ಹೇಳಿದರು.
ಅಂಬರೀಷ್ ಸ್ಮಾರಕ ಖಚಿತ: ಅಂಬರೀಷ್ ಒಬ್ಬ ಮಹಾನ್ ನಾಯಕ. ನಿಜವಾದ ನಾಯಕ, ಜನರ ಹೃದಯದಲ್ಲಿ ವಾಸ ಮಾಡಿದ ನಟ. ಅಂಬರೀಷ್ ಸ್ಮಾರಕಕ್ಕೆ ಯಾವುದೇ ತೊಂದರೆ ಇಲ್ಲ. ಸ್ಮಾರಕ ಕಂಠೀರವದಲ್ಲಿಯೇ ಆಗುತ್ತದೆ ಎಂದು ತಿಳಿಸಿದರು..
