ವೈಭವದ ಶೋಭಾಯಾತ್ರೆಯೊಂದಿಗೆ ಉಚ್ಚಿಲ ದಸರಾ ಸಂಪನ್ನ – Vishwanews24
ವೈಭವದ ಶೋಭಾಯಾತ್ರೆಯೊಂದಿಗೆ ಉಚ್ಚಿಲ ದಸರಾ ಸಂಪನ್ನ
ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಅದ್ದೂರಿಯಾಗಿ ಉಚ್ಚಿಲ ದಸರಾ- 2023 ಮೆರವಣಿಗೆ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖ ಸಂಪನ್ನಗೊಂಡಿತು.
ವಿಜಯದಶಮಿಯ ಪರ್ವಕಾಲದಲ್ಲಿ ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ಭವ್ಯವಾದ ಶೋಭಾಯಾತ್ರೆಗೆ ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ನೇತೃತ್ವದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಗೋಲ್ಡ್ ಫಿಂಚ್ ಹೋಟೆಲ್ಸ್ ಸಮೂಹದ ಸಿಎಂಡಿ ಪ್ರಕಾಶ್ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್ ಅವರು ಉಚ್ಚಿಲ ಕ್ಷೇತ್ರದ ಅಧಿದೇವತೆ ಶ್ರೀ ಮಹಾಲಕ್ಷ್ಮೀ ಅಮ್ಮನವರ ಭಾವಚಿತ್ರ ಹೊತ್ತ ಆನೆ ಅಂಬಾರಿಯ ಮೇಲೆ ಪುಷ್ಪವೃಷ್ಟಿಗೈಯುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಲಕ್ಷಾಂತರ ಭಕ್ತರು ಭಾವುಕರಾಗಿ ಕಾದು ಕುಳಿತು ಮೆರವಣಿಗೆಯಲ್ಲಿ ಸಾಗಿ ಬಂದ ಮೊಗವೀರ ಸಮಾಜದ ಕುಲಗುರು ಮಾಧವಮಂಗಳ ಗುರು, ಶ್ರೀ ಕ್ಷೇತ್ರ ಉಚ್ಚಿಲದ ಸ್ಥಾಪಕರಾದ ಸದಿಯ ಸಾಹುಕಾರರ ಮೂರ್ತಿಯ ಟ್ಯಾಬ್ಲೊಗಳೊಂದಿಗೆ ಪರ್ಸಿನ್ ಬೋಟ್ ಪ್ರತಿಕೃತಿ, ಮೀನುಗಾರಿಕಾ ಪ್ರತಿಬಿಂಬವಾಗಿ ಟ್ಯಾಬ್ಲೋ, ಹುಲಿವೇಷ, ಭಜನಾ ಸಂಕೀರ್ತನೆಗಳ ತಂಡ, ವ್ಯಾಯಾಮ ಶಾಲಾ ತಾಲೀಮು ತಂಡ, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಕ ವೇಷಭೂಷಣಗಳು ಮೆರವಣಿಗೆಯ ವೈಭವವನ್ನು ಸಾಕ್ಷೀಕರಿಸಿತು.
ಜಿಲ್ಲಾಡಳಿತದ ನಿರ್ದೇಶನದಂತೆ ಜಿಲ್ಲಾ ಪೊಲೀಸ್ ತಂಡ ಮೆರವಣಿಗೆಯುದ್ದಕ್ಕೂ ಸಾರ್ವಜನಿಕರಿಗೆ ಸಮಸ್ಯೆಯುಂಟಾಗದಂತೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು, ಮೆರವಣಿಗೆ ಸಾಂಗವಾಗಿ ನಡೆಯಲು ಕಾರಣವಾಯಿತು. ಮೆರವಣೆಗೆಯ ಉದ್ದಕ್ಕೂ ರಸ್ತೆ ಪಕ್ಕ ಲಕ್ಷಾಂತರ ಭಕ್ತರು ಭವ್ಯ ಮೆರವಣಿಗೆಯನ್ನು ಸ್ವಾಗತಿಸಿ ಭಾವುಕರಾದರು.
ದ.ಕ. ಮೊಗವೀರ ಮಹಾಜ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಮಹಿಳಾ ವಿಭಾಗದ ಅಧ್ಯಕ್ಷೆ ಉಷಾರಾಣಿ, ಪ್ರಮುಖರಾದ ನಯನಾ ಗಣೇಶ್, ಆನಂದ ಸಿ.ಕುಂದರ್, ಕೇಶವ ಕುಂದರ್ ಮತ್ತಿತರ ಗಣ್ಯರು ಇದ್ದರು.
