ಶಬರಿಮಲೆಗೆ ಮಹಿಳೆಯರ ಪ್ರವೇಶ : ದೇಗುಲ ಪ್ರವೇಶಕ್ಕೆ ಇರುವ ಹಳೆಯ ಸಂಪ್ರದಾಯದಲ್ಲಿ ಯಾರೋಬ್ಬರೂ ಹಸ್ತಕ್ಷೇಪ ಮಾಡಬಾರದು :ಸೂಪರ್‌ ಸ್ಟಾರ್‌ ರಜನಿಕಾಂತ್

Featured, ರಾಷ್ಟ್ರ ನ್ಯೂಸ್

ಚೆನ್ನೈ: ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಇರುವ ವಯಸ್ಸಿನ ಮಿತಿಯ ಹಳೆಯ ಸಂಪ್ರದಾಯದಲ್ಲಿ ಯಾರೋಬ್ಬರೂ ಹಸ್ತಕ್ಷೇಪ ಮಾಡಬಾರದೆಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿಕೊಟ್ಟಿದ್ದರ ಬಗ್ಗೆ ಇದೇ ಮೊದಲ ಬಾರಿಗೆ ನಟ ರಜನಿಕಾಂತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಅನಾದಿಕಾಲದಿಂದಲೂ ನಮ್ಮ ಸಮಾಜದಲ್ಲಿ ಆಚರಣೆಗಳನ್ನು ನಾವು ಕಟ್ಟುನಿಟ್ಟಾಗಿ ನಡೆಸಿಕೊಂಡು ಬಂದಿದ್ದೇವೆ. ಹೀಗಾಗಿ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದರು.

ನಮ್ಮ ದೇಶದಲ್ಲಿರುವ ಪ್ರತಿಯೊಂದು ದೇವಾಲಗಳು ಸಹ, ತನ್ನದೇ ಆದ ರೂಢಿ-ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದಿರುತ್ತವೆ. ವಿಶೇಷವಾಗಿ ಸ್ವಾಮಿ ಶಬರಿಮಲೆ ಅಯ್ಯಪ್ಪ ದೇಗುಲ ವಿಚಾರದಲ್ಲಿಯೂ ಸಹ ಅನೇಕ ಸಂಪ್ರದಾಯಗಳು ರೂಢಿಯಲ್ಲಿವೆ. ಹೀಗಾಗಿ ಶಬರಿಮಲ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಯಸ್ಸಿನ ವಿಚಾರಕ್ಕೆ ವಿಧಿಸಿರುವ ಹಳೆಯ ಸಂಪ್ರದಾಯದಲ್ಲಿ ಯಾರೋಬ್ಬರು ಸಹ ಹಸ್ತಕ್ಷೇಪ ಮಾಡಬಾರದೆಂಬುದು ನನ್ನ ಮನವಿ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಶಬರಿಮಲೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ತಲೆ ಬಾಗುತ್ತೇನೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇನೆ. ಆದರೆ ಇದು ಧರ್ಮ ಹಾಗೂ ಅದಕ್ಕೆ ಸಂಬಂಧಪಟ್ಟ ಆಚರಣೆಗಳ ವಿಷಯಕ್ಕೆ ಬಂದಾಗ ಎಲ್ಲರೂ ಎಚ್ಚರ ವಹಹಿಸಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿದರು..