ಶ್ರೀಕೃಷ್ಣನ ಗರ್ಭಗುಡಿ ಗೋಪುರಕ್ಕೆ 100 ಕೆ. ಜಿ. ಬಂಗಾರದ ಹೊದಿಕೆ ಹೊದಿಸುವ ಮಹತ್ತರ ಕಾರ್ಯಕ್ಕೆ ಚಾಲನೆ..
ಉಡುಪಿ: ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸರ್ವಮೂಲ ಗ್ರಂಥ, ಹಂಸ ಮಂತ್ರಗಳಿಂದ ಮುದ್ರಿತವಾದ 100 ಕೆ.ಜಿ. ಬಂಗಾರದ ತಗಡನ್ನು ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಹೊದಿಸುವ ಮಹತ್ತರ ಕಾರ್ಯಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಬುಧವಾರ ಚಾಲನೆ ನೀಡಿದರು.
ವೇದಿಕೆಯಲ್ಲೇ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀಕೃಷ್ಣ ಅಲಂಕಾರ ಪ್ರಿಯ. ಆತನಿಗೆ ಎಷ್ಟೇ ಶೃಂಗಾರ ಮಾಡಿದರೂ ಇಷ್ಟ. ಗೋಪುರಕ್ಕೆ ಮಾಡುವ ಚಿನ್ನದ ಹೊದಿಕೆ ಶ್ರೀಕೃಷ್ಣನ ವಿಗ್ರಹಕ್ಕೆ ಮಾಡಿದಂತಾಗಲಿದೆಯೇ ಹೊರತು ಮಣ್ಣಿಗೆ ಮಾಡುವ ಹೊದಿಕೆಯಲ್ಲ. ಇದನ್ನೆಲ್ಲ ಶ್ರೀಕೃಷ್ಣನೇ ಭಕ್ತರ ಸಹಕಾರದೊಂದಿಗೆ ಮಾಡಿಸುತ್ತಿದ್ದಾನೆ ಎಂದರು. ನಾವು ಈ ಗೋಪುರಕ್ಕೆ ನಿಮಿತ್ತ ಮಾತ್ರ ಕೃಷ್ಣ ದೇವರೇ ಕೆಲಸವನ್ನು ಮಾಡಿ ಅದರ ಪುಣ್ಯಾಂಶವು ನಮಗೆ ನೀಡುತ್ತಾರೆ. ಭಕ್ತರು ಮನಸ್ಸನ್ನು ದೇವರಲ್ಲಿಡಬೇಕು. ದೇವರ ಸ್ಮರಣೆ ಮಾಡುವಾಗ ನಮ್ಮ ಚಂಚಲ ಮನಸ್ಸು ಬೆಲೆಬಾಳುವಂತ ಬಂಗಾರದೊಳಗಿರುತ್ತದೆ ಆದುದರಿಂದ ಬಂಗಾರವನ್ನು ದೇವರಿಗೆ ಅರ್ಪಿಸಿದರೆ ಮನಸ್ಸನ್ನು ಸಮರ್ಪಣೆ ಮಾಡಿದಂತಗುತ್ತದೆ ಎಂದು ನುಡಿದರು.
ಮನುಷ್ಯ ಧರಿಸಿದ ಬಟ್ಟೆ ಸಹಿತ ಇತರ ವಸ್ತು ದೇವರಿಗೆ ನೀಡಲಾಗದು. ಆದರೆ ಮೈ ಮೇಲೆ ಧರಿಸಿದ ಬಂಗಾರ ದೇವರಿಗೆ ಸ್ವೀಕಾರರ್ಹವಾಗುತ್ತದೆ. ನಿಮ್ಮ ಮೈ ಮುಟ್ಟಿದ ಬಂಗಾರ ಶ್ರೀಕೃಷ್ಣ ಸ್ವೀಕರಿಸಿ ನಿಮ್ಮೆಲ್ಲರ ಬದುಕು ಬಂಗಾರವಾಗುತ್ತದೆ ಎಂದು ಹಾರೈಸಿದರು.
ದೇವರ ಸ್ವರ್ಣದ ಕೆಲಸ ಪಾರದರ್ಶಕವಾಗಿ ನಡೆಯುತ್ತಿದೆ. ರಥಬೀದಿ ಸಮೀಪವೇ ಕೆಲಸ ನಡೆಯಲಿದ್ದು, ಸಿಸಿ ಕ್ಯಾಮರಾ ಜೋಡಿಸಲಾಗುವುದು. ಬಂಗಾರದ ಕೆಲಸವನ್ನು ನೋಡಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಭಕ್ತರು ನೀಡುವ ಸಲಹೆ, ಸೂಚನೆಗಳನ್ನು ಸ್ವೀಕಾರ ಮಾಡುವುದಾಗಿ ಶ್ರೀಪಾದರು ತಿಳಿಸಿದರು.
ಹೊಸಪೇಟೆ ಗಣಿ ಉದ್ಯಮಿ ಪತ್ತಿಕೊಂಡ ಪ್ರಭಾಕರ್, ಐಬಿಎಂ ಇಂಡಿಯಾ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ನಟರಾಜ್ ರಾಧಾಕೃಷ್ಣನ್, ಉಡುಪಿ ಜಿಲ್ಲಾ ಜ್ಯುವೆಲ್ಲರ್ಸ್ ಎಸೋಸಿಯೇಶನ್ ಅಧ್ಯಕ್ಷ ಜಿ. ಜಯ ಆಚಾರ್ಯ, ಸಮರ್ಪಣ ಸಮೂಹ ಸಂಸ್ಥೆಗಳ ಸಿಇಒ ದಿಲೀಪ್ ಸತ್ಯ, ಕಟೀಲು ದೇವಳದ ವಾಸುದೇವ ಆಸ್ರಣ್ಣ, ಉದ್ಯಮಿ ಭುವನೇಂದ್ರ ಕಿದಿಯೂರು ಉಪಸ್ಥಿತರಿದ್ದರು.
ಪಿ.ಆರ್. ಪ್ರಹ್ಲಾದ್ ಆಚಾರ್ಯ ಸ್ವಾಗತಿಸಿದರು. ಬಿ.ಆರ್. ಗೋಪಾಲ ಆಚಾರ್ಯ ವಂದಿಸಿದರು. ವಿದ್ವಾಂಸ ಕೊರ್ಲಹಳ್ಳಿ ವೆಂಕಟೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
