ಸಂಸದರಾದ ಡಿ.ವಿ.ಸದಾನಂದಗೌಡ, ಸುರೇಶ ಅಂಗಡಿ, ಪ್ರಹ್ಲಾದ್ ಜೋಶಿಗೆ ಸಚಿವ ಸಂಪುಟ ಸ್ಥಾನ -Vishwanews24
ನವದೆಹಲಿ: ರಾಜ್ಯದ ಬಿಜೆಪಿ ಸಂಸದರಾದ ಡಿ.ವಿ.ಸದಾನಂದಗೌಡ, ಸುರೇಶ ಅಂಗಡಿ, ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ನಾಯಕರಿಗೆ ಕರೆ ಮಾಡಿ ಮಾತನಾಡಿದ್ದಾರೆ.
ಇಂದು ಸಂಜೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹಿರಿಯರಾದ ಜಿ.ಎಸ್. ಬಸವರಾಜ್, ಶ್ರೀನಿವಾಸ ಪ್ರಸಾದ್, ಮೂರನೇ ಬಾರಿ ಆಯ್ಕೆಯಾಗಿರುವ ಶಿವಕುಮಾರ್ ಉದಾಸಿ, ಮಹಿಳಾ ಕೋಟಾದಡಿ ಶೋಭಾ ಕರಂದ್ಲಾಜೆ ಅವರು ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಸಚಿವ ಸ್ಥಾನದ ಹಂಚಿಕೆ ಕುರಿತು ಬಿಜೆಪಿ ವಲಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಲೆಕ್ಕಾಚಾರಗಳು ನಡೆದಿವೆ. ಸಂಪುಟ ಸೇರಲಿರುವವರು ಯಾರು ಎಂಬುದು ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಈ ವರಿಷ್ಠರು ಅನುಭವಿಗಳಿಗೆ ಅವಕಾಶ ನೀಡಬಹುದೇ, ಕಿರಿಯರಿಗೆ ಮಣೆ ಹಾಕಬಹುದೇ, ಜಾತಿ ಮತ್ತು ಪ್ರಾಂತ್ಯದ ಪ್ರಾಬಲ್ಯವನ್ನು ಆಧರಿಸಿ ಸಚಿವ ಸ್ಥಾನವನ್ನು ನೀಡಬಹುದೇ’ ಎಂಬ ಲೆಕ್ಕಾಚಾರಗಳೂ ನಡೆದಿದ್ದವು.
