ಸರಕಾರ ನರಸತ್ತಂತಿದೆ ,ಅಧಿಕಾರಿಗಳು ನಿಧಾನಗತಿಯಲ್ಲಿದ್ದಾರೆ ಉಡುಪಿಯಲ್ಲಿ ಸಂಸದೆ ಶೋಬಾ ಕರಂದ್ಲಾಜೆ ಕಿಡಿ
ಉಡುಪಿ: ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಷ್ಟೇ ಸೀಮಿತವಾಗಿರುವ ಸರಕಾರ ಸತ್ತಿದೆ, ಅಧಿಕಾರಿಗಳು ನಿಧಾನಗತಿಯಲ್ಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಸಾಲ ಕೂಡಲೇ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೈಯ್ಯಲ್ಲಿ ಎಲ್ಲಾ ಖಾತೆಗಳಿದ್ದು ಜೆಡಿಎಸ್, ಕಾಂಗ್ರೆಸ್ ಶಾಸಕರು 15ದಿನಗಳನ್ನು ರೆಸಾರ್ಟ್ನಲ್ಲಿ ಕಳೆದು ಈಗ ದಿಲ್ಲಿಯಲ್ಲಿ ಮಂತ್ರಿ ಸ್ಥಾನ, ಖಾತೆಗಾಗಿ ಬೀಡು ಬಿಟ್ಟಿದ್ದಾರೆ, ಲಾಬಿ ನಿರತರಾಗಿದ್ದಾರೆ ಎಂದವರು ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಅಕಾಲಿಕ ಮಳೆಗೆ ಸಾವಿರಾರು ಮನೆಗಳು, ಮರಗಳಿಗೆ ಹಾನಿಯಾಗಿದ್ದು ಮೆಸ್ಕಾಂ ಪ್ರಕಾರ 1,000 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಒಂಬತ್ತು ಗಂಟೆಗಳಲ್ಲಿ 270 ಮಿ. ಮೀ. ಮಳೆ ಬಿದ್ದಿದೆ. ರಾಜ್ಯ ಸರಕಾರ ಮಳೆ, ನೆರೆಯಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಪರಿಹಾರ, ಮನೆ ಕಟ್ಟಲು ನೆರವು ನೀಡಬೇಕು. ತೋಟ, ವಾಹನ ಹಾನಿಗೂ ಸೂಕ್ತ ಪರಿಹಾರವನ್ನು ಅಧಿಕಾರಿಗಳ ಜತೆ ಚರ್ಚಿಸಿ ನೀಡಬೇಕು ಎಂದವರು ಒತ್ತಾಯಿಸಿದ್ದಾರೆ.
ಜಾತ್ಯತೀತ ಜನತಾ ದಳ ಪ್ರಣಾಳಿಕೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಸಾಲ ಮನ್ನಾ ಜತೆಗೆ ಧರ್ಮಸ್ಥಳದಲ್ಲಿ ಲೇವಾದೇವಿದಾರರಿಂದ ಪಡೆದ ಸಾಲವನ್ನೂ ಮನ್ನಾ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದಾರೆ. ರೈತರ ಆತ್ಮಹತ್ಯೆ ಸರಕಾರದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಆಡಳಿತ ಹಾಗೂ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು ಎಂದವರು ಪಟ್ಟು ಹಿಡಿದಿದ್ದಾರೆ.
