ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳು – Vishwanews24

Featured, ರಾಜ್ಯ ನ್ಯೂಸ್, ಸಿನಿಮಾ

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸರಳವಾಗಿ ಆಚರಿಸಿದ್ದಾರೆ. ಕೇಕ್, ಹಾರ, ಪಟಾಕಿ ಬದಲಿಗೆ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಬೆಂಗಳೂರು ರಾಜರಾಜೇಶ್ವರಿ ನಗರದ ದರ್ಶನ್ ನಿವಾಸದ ಬಳಿ ತಡ ರಾತ್ರಿಯಿಂದಲೇ ಅಭಿಮಾನಿಗಳ ದಂಡು ನೆರೆದಿದ್ದು, ದರ್ಶನ್ ಈ ಬಾರಿ ಕೇಕ್ ಕಟ್ ಮಾಡದೇ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.

ಹಿರಿಯ ನಟ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸದಿರಲು ದರ್ಶನ್ ಮೊದಲೇ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಸಂಭ್ರಮಾಚಾರಣೆಯಿಂದ ಬೇರೆಯವರಿಗೆ ತೊಂದರೆಯಾಗುತ್ತದೆ ಎಂಬುದನ್ನು ಮನಗಂಡ ಅವರು ಅಭಿಮಾನಿಗಳಿಗೆ ಮೊದಲೇ ಸೂಚನೆ ನೀಡಿದ್ದಾರೆ.

ಅಲ್ಲದೇ, ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ತಿಳಿಸಿದ್ದರು. ಅಂತೆಯೇ ಹೆಚ್ಚಿನ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಹಾರ, ಕೇಕ್, ಪಟಾಕಿ ಬದಲಿಗೆ ಅಕ್ಕಿ, ಮೊದಲಾದವುಗಳನ್ನು ತಂದು ಕೊಟ್ಟು ಶುಭಾಶಯ ಹೇಳಿದ್ದಾರೆ. ಧವಸ, ಧಾನ್ಯಗಳನ್ನು ಅವಶ್ಯಕತೆ ಇರುವವರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ಅಭಿಮಾನಿಗಳು ದರ್ಶನ್ ಮನೆ ಮುಂದೆ ಜಮಾಯಿಸದೇ ಅನಾಥಾಶ್ರಮಗಳಿಗೆ ಅನ್ನದಾನ ಮಾಡುತ್ತಿದ್ದಾರೆ. ದರ್ಶನ್ ಕೋರಿಕೆಯಂತೆ ಸಿದ್ಧಗಂಗಾ ಮಠಕ್ಕೆ 12 ಮೂಟೆ ಅಕ್ಕಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇನ್ನು, ತಮಗೆ ಶುಭಕೋರಲು ಮನೆಗೆ ಬರುವ ಅಭಿಮಾನಿಗಳಿಗೆ ದರ್ಶನ್ ಊಟ ಹಾಕಿ ಕಳುಹಿಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಂದ ಸಮಾಜಕ್ಕೆ ಒಳ್ಳೆಯದಾಗುವಂತೆ ನೋಡಿಕೊಂಡಿದ್ದಾರೆ ಡಿ ಬಾಸ್.

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದ ದರ್ಶನ್, ಯೋಧರೇ ನಿಜವಾದ ಹೀರೋಗಳು. ಕಳೆದ ಬಾರಿ ಹುಟ್ಟುಹಬ್ಬಕ್ಕೆ ಬಂದಿದ್ದ ಭಾರಿ ಪ್ರಮಾಣದ ಹೂವಿನ ಹಾರ, ಕೇಕ್ ಗಳು ವೆಸ್ಟ್ ಆಗಿದ್ದಾಗ ಮನಸ್ಸಿಗೆ ನೋವಾಗಿತ್ತು. ಹಾಗಾಗಿ ಅವುಗಳನ್ನು ತರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದೆ. ಬೇಕಾದರೆ ಧವಸ, ಧಾನ್ಯ ತಂದುಕೊಟ್ಟರೆ ಅವಶ್ಯಕತೆ ಇರುವವರಿಗೆ ತಲುಪಿಸುವುದಾಗಿ ಹೇಳಲಾಗಿತ್ತು. ಅಂತೆಯೇ ಅನೇಕ ಅಭಿಮಾನಿಗಳು ಅಕ್ಕಿ ಇತರೆ ವಸ್ತು ತಂದು ಕೊಟ್ಟಿದ್ದಾರೆ. ಅವುಗಳನ್ನು ಅವಶ್ಯಕತೆ ಇರುವವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.