ಸುಂದರ ಪ್ರಕೃತಿಯ ಮಡಿಲಿನಲ್ಲಿ ಶಿವ ಪಾರ್ವತಿಯರ ಆಕರ್ಷಣೀಯ ಆರಾಧನಾ ತಾಣ ಶ್ರೀ ಕ್ಷೇತ್ರ ಕಾರಿಂಜ ; ಕಾಣಬನ್ನಿ ಕಾರಿಂಜದ ವಿಶೇಷ – Vishwanews24
ಕಾರಿಂಜ ಕ್ಷೇತ್ರ : ದಕ್ಷಿಣ ಕನ್ನಡ ಜಿಲ್ಲೆಯ ಕಾವಳ ಮೂಡೂರು ಗ್ರಾಮದಲ್ಲಿ ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿಗೂ ಮಿಕ್ಕಿ ಎತ್ತರದಲ್ಲಿರುವುದೇ ಶಿವ ಪಾರ್ವತಿಯರ ಮಿಲನದ ಆಕರ್ಷಣೀಯ ಆರಾಧನಾ ತಾಣವೇ ಕಾರಿಂಜ.
ಬಿ.ಸಿ. ರೋಡಿನಿಂದ 15 ಕಿ.ಮೀ ದೂರ ಇರುವ ಈ ಕ್ಷೇತ್ರಕ್ಕೆ ಬಂಟ್ವಾಳ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಮುಂದೆ ಸಾಗಿದಾಗ ವಗ್ಗದಲ್ಲಿ ದೇಗುಲದ ಮಹಾದ್ವಾರ ಕೈಬೀಸಿ ಸ್ವಾಗತಿಸುತ್ತದೆ. ಇಲ್ಲಿಂದ ಕೇವಲ 2.4 ಕಿ.ಮೀ ಅಂತರ ಕಾನನದ ನಡುವೆ ತಂಗಾಳೀಗೆ ಮೈಯೊಡ್ಡಿ ಸಾಗಿದರೆ ಮೇಲೆ ಕಾಣುವುದೇ ಕಾರಿಂಜ ಬೆಟ್ಟ.
ಬಿ.ಸಿ.ರೋಡಿನಿಂದ, ಇಲ್ಲವೇ ವಗ್ಗದಿಂದ ಸರಕಾರಿ ಬಸ್ಸು ಹಾಗು ವಗ್ಗದಿಂದ ಇತರ ವಾಹನಗಳೂ ಭಕ್ತರ ಅನುಕೂಲಕ್ಕೆ ಇಲ್ಲಿದೆ. ಮಾತೃ ಶಕ್ತಿಯ ಪ್ರತೀಕವಾಗಿ ಪಾರ್ವತಿ ದೇವಿ ಮತ್ತು ಪಿತೃ ಶಕ್ತಿಯ ಸಂಕೇತವಾಗಿ ಪರಮೇಶ್ವರ ಧರೆಗೆ ಇಳಿದ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಇಲ್ಲಿ ಪರಮೇಶ್ವರ ಬೆಟ್ಟದ ತುದಿಯಲ್ಲಿದ್ದರೆ, ಪಾರ್ವತಿ ದೇವಿ ಬೆಟ್ಟದ ಮಧ್ಯಭಾಗದಲ್ಲಿ (ಪರಮೇಶ್ವರನ ಗರ್ಭಗುಡಿಗಿಂತ ಸುಮಾರು ನೂರೈವತ್ತು ಅಡಿಗಳಷ್ಟು ಕೆಳಗೆ) ನೆಲೆಯಾಗಿದ್ದಾಳೆ
ಇತಿಹಾಸ
ಎಂಟುನೂರು ವರ್ಷಗಳ ಹಿಂದೆ ಕಾರಿಂಜತ್ತಾಯ ಮತ್ತು ಇಚ್ಳತ್ತಾಯ ಎಂಬ ಇಬ್ಬರು ಬ್ರಾಹ್ಮಣ ಸಹೋದರರು ಉತ್ತರ ಕನ್ನಡ ದ ಕುಂಬಲದಿಂದ ಸನಾತನ ಸಂಸ್ಕೃತಿಯ ಪ್ರಚಾರಕಾಗಿ ಬಂದಿದ್ದರು. ಆ ಸಮಯದಲ್ಲಿ ತುಳುನಾಡಲ್ಲಿ ರಾಜ ಆಡಳಿತ ಅಸ್ಥಿತ್ವದಲ್ಲಿ ಇತ್ತು. ಭೂತಾರಾಧನೆ ಇಲ್ಲಿನ ಜನರ ಮುಖ್ಯ ಆಚರಣೆ ಆಗಿತ್ತು. ಯಾವ ಜಾಗದಲ್ಲಿ ಇಚ್ಳತ್ತಾಯ ನೆಲೆಯಾದನು ಆ ಪ್ರದೇಶ ಇಚ್ಲಂಪಾಡಿ ಎಂದು ಪ್ರಸಿದ್ಧಿಯಾಯಿತು ಹಾಗೂ ಎಲ್ಲಿ ಕಾರಿಂಜತ್ತಾಯ ನೆಲೆಯಾದನು ಆ ಜಾಗ ಕಾರಿಂಜ ಎಂದು ಪ್ರಸಿದ್ದಿಯಾಯಿತು. ಕಾರಿಂಜ ಮತ್ತು ಇಚ್ಲಂಪಾಡಿ ನಡುವೆ ಸುಂದರ ಪ್ರಕೃತಿ ದ್ರಶ್ಯ ಅಲ್ಲಿ ಒಂದು ಸುಂದರವಾದ ಶಿವ ದೇವಸ್ಥಾನ ನಿರ್ಮಾಣವಾಯಿತು. ಈ ಕ್ಷೇತ್ರ ಕಾರಿಂಜೇಶ್ವರ ಎಂದು ಪ್ರಸಿದ್ಧಿಯಾಯಿತು.
ಕಾರಿಂಜ ಕ್ಷೇತ್ರದ ವಿಶೇಷತೆ
ಕಾರಿಂಜ ಬೆಟ್ಟವು ಸಮುದ್ರ ಮಟ್ಟದಿಂದ ೧೫೦೦ ಅಡಿ ಎತ್ತರದಲ್ಲಿದೆ. ಬಹಳ ಸುಂದರ ಸ್ಥಳ ಕಾರಿಂಜೇಶ್ವರ ದೇವಸ್ಥಾನ. ಬೆಟ್ಟವು ಬೃಹತ್ ಬಂಡೆಗಳಿಂದ ಮಾಡಲ್ಪಟ್ಟಿದು ಕಪಿಗಳಿಗೆ ಆಶ್ರಯವಾಗಿದೆ. ದೂರದಿಂದ ವೀಕ್ಷಿಸಿದಾಗ ಏಕಶಿಲಾ ಬೆಟ್ಟದಂತೆ ಭಾಸವಾಗುತ್ತದೆ. ಶಿವನಿಗೂ, ಪಾರ್ವತಿಗೂ ಪ್ರತ್ಯೇಕ ದೇವಸ್ಥಾನವಿರುವುದು ಇಲ್ಲಿನ ವೈಶಿಷ್ಟ್ಯ. ಗುಡ್ಡದ ನಡುವೆ ಪಾರ್ವತಿ ಹಾಗೂ ಗುಡ್ಡದ ತುತ್ತ ತುದಿಯಲ್ಲಿ ಶಿವನಿಗೆ ಶಿಲಾಮಯ ಗರ್ಭಗುಡಿಯಿದೆ.
ಗುಡ್ಡದ ಕೆಳಗಿನಿಂದ ಮೇಲಿನ ಶಿವ ದೇವಸ್ಥಾನ ತನಕ ಸುಮಾರು ೫೦೦ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ದರ್ಶನ ಮಾಡುವುದು ದೈವಭಕ್ತರಿಗೆ ಹಾಗೂ ಏಕದಿನ ಪಿಕ್ನಿಕ್ ಇಟ್ಟುಕೊಂಡವರಿಗೆ ಸೂಕ್ತ ಆಯ್ಕೆ. ಮೆಟ್ಟಲುಗಳಲ್ಲದೇ ಇತ್ತೀಚೆಗೆ ಕಾರಿಂಜ ಬೆಟ್ಟದ ಅರ್ಧದವರೆಗೆ, ಅಂದರೆ ಪಾರ್ವತಿ ದೇವಸ್ಥಾನ ತನಕ ಉತ್ತಮ ಡಾಂಬರು ರಸ್ತೆ ಕೂಡಾ ನಿರ್ಮಾಣವಾಗಿದೆ.
ಹೀಗಿದೆ ನೋಡಿ ಕ್ಷೇತ್ರ
ಮೊದಲು ಬೆಟ್ಟದ ಬುಡದಲ್ಲಿರುವ ಗದೆಯ ಆಕಾರದ ವಿಶಾಲ ‘ಗದಾತೀರ್ಥ’ ಕಾಣಸಿಗುತ್ತದೆ. ಸುಮಾರು 237 ಮೀ. ಉದ್ದ 55 ಮೀ. ಅಗಲದ ಶುದ್ಧ ನೀರಿನ ಕೊಳವಿದು. ಇಲ್ಲಿ ಜಲಪ್ರೋಕ್ಷಣೆ ಮಾಡಿಕೊಂಡು ಬೆಟ್ಟ ಹತ್ತಲು ಶುರು ಮಾಡಬಹುದು. ಇಲ್ಲಿಂದ ಬೃಹತ್ ಬಂಡೆಯ ಮೆಟ್ಟಿಲು ಏರುತ್ತಾ ಸಾಗಿದರೆ ಪಾರ್ವತಿ ಗುಡಿ ಸಿಗುತ್ತದೆ. ನಡುವೆ ವಿನಾಯಕ ಗುಡಿಯನ್ನೂ ಕಾಣಬಹುದು. ನಡು ನಡುವೆ, ಕಾಡಿನಿಂದ ಬರುವ ವಾನರ ಸೇನೆಯೂ ಸ್ವಾಗತಿಸುತ್ತದೆ.
ಕ್ಷೇತ್ರಕ್ಕೆ ಹೋಗುವ ಮಾರ್ಗ
ಮೊದಲು ಬೆಟ್ಟದ ಬುಡದಲ್ಲಿರುವ ಗದೆಯ ಆಕಾರದ ವಿಶಾಲ ’ಗದಾತೀರ್ಥ’ ಕಾಣಸಿಗುತ್ತದೆ. ಶುದ್ಧ ನೀರಿನ ಕೊಳವು ಸುಮಾರು ೨೩೭ ಮೀ. ಉದ್ದ ೫೫ ಮೀ. ಅಗಲವಿದೆ. ಇಲ್ಲಿ ಜಲಪ್ರೋಕ್ಷಣೆ ಮಾಡಿಕೊಂಡು ಬೆಟ್ಟ ಹತ್ತಲು ಶುರು ಮಾಡಬಹುದು. ಇದು ದೊಡ್ಡಗಾತ್ರದ ಮೀನುಗಳಿಗೆ ಆಶ್ರಯವನ್ನು ಕೊಟ್ಟಿದೆ. ಕೆರೆಯಪಕ್ಕದಲ್ಲಿ ವಿಶಾಲವಾದ ಅಶ್ವತ್ತವೃಕ್ಷ; ಅಲ್ಲೇ ಬಲಕ್ಕೆ ಹುಲ್ಲುಹಾಸಿದ ಹರ ಮತ್ತು ಕಾಡು ಮುಚ್ಚಿಹೋದ ಪುರಾತನ ಗುಹೆಯೊಂದಿದೆ.
ಇಲ್ಲಿಂದ ಬೃಹತ್ ಬಂಡೆಯ ಮೆಟ್ಟಿಲು ಏರುತ್ತಾ (ಇನ್ನೊಂದು ಬದಿಯಲ್ಲಿ ಡಾಂಬರು ರಸ್ತೆ ಕೂಡಾ ಇದೆ.) ಸಾಗಿದರೆ ಪಾರ್ವತಿ ಗುಡಿ ಸಿಗುತ್ತದೆ. ಕೊಡ್ಯಮಲೆ ಅರಣ್ಯ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿರುವ ಗದಾತೀರ್ಥ, ಪಾರ್ವತಿ ಕ್ಷೇತ್ರದ ಸನಿಹ ಏಕಶಿಲಾ ಗಣಪತಿ ಕ್ಷೇತ್ರದ ಎದುರಿಗಿ ರುವ ಉಗ್ರಾಣಿ ಗುಹೆಗಳು, ಉಕ್ಕುಡದ ಬಾಗಿಲು, ಉಂಗುಷ್ಟ ಮತ್ತು ಮೊಣಕಾಲು ತೀರ್ಥ, ಮಹಾಭಾರತದ ಅರ್ಜುನ ಹಂದಿಗೆ ಬಾಣಬಿಟ್ಟು ಹೋದ ಲಂಬರೇಖೆ ನೋಡಲೇಬೇಕಾದ ಪ್ರಾಕೃತಿಕ ವಿಸ್ಮಯಗಳು. ನಡುವೆ ವಿನಾಯಕ ಗುಡಿಯನ್ನೂ ಹಾಗೂ ಸಣ್ಣಪುಟ್ಟ ತೀರ್ಥಗಳನ್ನು ಕಾಣಬಹುದು. ನಡು ನಡುವೆ, ಕಾಡಿನಿಂದ ಬರುವ ವಾನರ ಸೇನೆಯೂ ಸ್ವಾಗತಿಸುತ್ತದೆ.
ಕಡಿದಾದ ದಾರಿ
ಪಾರ್ವತಿ ದರ್ಶನದ ನಂತರ ತೀರಾ ಕಡಿದಾದ ಸುಸಜ್ಜಿತ ೧೪೨ ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ ’ಉಕ್ಕಡದ ಬಾಗಿಲು’ ಕಾಣಸಿಗುತ್ತದೆ. ಇದು ಕಲ್ಲಿನಿಂದ ಮಾಡಿದ ದ್ವಾರ. ಅಲ್ಲಿಂದ ಮುಂದಕ್ಕೆ ಬಂಡೆ ಹಾಗೂ ಕುರುಚಲು ಮರ-ಗಿಡಗಳ ನಡುವೆ ೧೧೮ ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಿದರೆ ಬೆಟ್ಟದ ತುದಿಯಲ್ಲಿದೆ ಶಿಲಾಮಯ ಶಿವ ದೇವಸ್ಥಾನ.
ಅದಕ್ಕೂ ಮೊದಲು ಮೆಟ್ಟಿಲುಗಳ ಪಕ್ಕ ಉಂಗುಷ್ಟ ತೀರ್ಥ, ಜಾನು ತೀರ್ಥ ಸಿಗುತ್ತದೆ. ಈ ಪುಟ್ಟ ಕೆರೆಗಳನ್ನು ಹಾಗೂ ಕೆಳಗಿನ ಗದಾತೀರ್ಥವನ್ನು ಮಹಾಭಾರತ ಕಾಲದಲ್ಲಿ ಭೀಮಸೇನ ನಿರ್ಮಿಸಿದ ಎಂಬ ನಂಬಿಕೆ. ವರ್ಷದ ಎಲ್ಲಾ ದಿನ ಬೆಟ್ಟದ ತುದಿಯಲ್ಲಿರುವ ಈ ಕೆರೆಗಳಲ್ಲಿ ನೀರು ಬತ್ತದಿರುವುದು ವಿಶೇಷ. ದೇವಳ ಪಕ್ಕದಲ್ಲಿರುವ ’ಹಂದಿಕೆರೆ’ಯೂ ಅರ್ಜುನನಿಂದಾಗಿ ಉಂಟಾಯಿತು ಎಂಬ ಕತೆಯಿದೆ.
ಬೆಟ್ಟ ವಿಶೇಷಗಳು
ಬೆಟ್ಟದ ತುದಿಯ ಶಿವ ದೇವಸ್ಥಾನದಿಂದ ನಾಲ್ಲೂ ದಿಕ್ಕಿನಲ್ಲಿ ಹಚ್ಚ ಹಸಿರು ದೃಶ್ಯ ವೈಭವ. ಇಲ್ಲಿಂದ ಕೆಳಗಿನ ಬೃಹತ್ ಶಿಲಾಬೆಟ್ಟದತ್ತ ಕೂಗಿಕೊಂಡರೆ ಸ್ಪಷ್ಟ ಪ್ರತಿಧ್ವನಿ ನೀಡುವ ಪ್ರತಿಧ್ವನಿ ಕಲ್ಲು ಇದೆ. ಸತ್ಯ ಪ್ರಮಾಣ ಮಾಡುತ್ತಿದ್ದ ಸೀತಾದೇವಿ ಪ್ರಮಾಣ ಕಲ್ಲು ಇದೆ. ವಾನರ ಸೇನೆಗೆ ನಿತ್ಯ ಅನ ನೈವೇದ್ಯ ನೀಡುವುದು ಇನೊಂದು ವಿಶೇಷ. ಇಲ್ಲಿ ಒಂದು ಭಾರೀ ಗಾತ್ರದ ಮಂಗ (ಕಾರಿಂಜ ದಡ್ಡ) ಇತ್ತಂತೆ.
ದೇವರ ಪೂಜೆ ಆದ ಮೇಲೆ ದೇವರ ಪ್ರಸಾದವನ್ನು ಒಂದು ದೊಡ್ಡ ಪಾದೆ ಕಲ್ಲಿನ ಮೇಲೆ ಈ ಮಂಗ ಹಾಗೂ ಉಳಿದ ಮಂಗಗಳಿಗಾಗಿ ಹಾಕುತ್ತಿದ್ದರು.(ಈಗಲೂ ಕಾರಿಂಜ ದಡ್ಡ ಇಲ್ಲದಿದ್ದರೂ ಮಂಗಗಳಿಗೆ ಪ್ರಸಾದ ಹಾಕುವುದನ್ನು ಮುಂದುವರೆಸಿದ್ದಾರೆ) ಅನ್ನ ಬಿಸಿ ಇದ್ದರೆ ಈ ಕಾರಿಂಜದಡ್ಡ ಸಮೀಪ ಇದ್ದ ಮಂಗವನ್ನೇ ಹಿಡಿದು ಅನ್ನವನ್ನು ಕಲಸುತ್ತಿತ್ತಂತೆ. ನಿಜವೋ ಸುಳ್ಳೋ ಗೊತ್ತಿಲ್ಲ. ದೇವಸ್ಥಾನದ ಸುತ್ತಮುತ್ತ ಚಾರಣ ಕೈಗೊಳ್ಳಬಹುದಾದ ಸಾಕಷ್ಟು ತಾಣಗಳಿವೆ.
ಉತ್ಸವ
ಶಿವರಾತ್ರಿ ಇಲ್ಲಿನ ಪ್ರಧಾನ ಉತ್ಸವ. ನಾಲ್ಕು ದಿನ ನಡೆಯುತ್ತದೆ. ಜಾತ್ರೆ ವೇಳೆ ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿ ದೇವಸ್ಥಾನಕ್ಕೆ ತರುವ ಮೂಲಕ ಶಿವ-ಪಾರ್ವತಿಯರ ಭೇಟಿ ನಡೆಯುತ್ತದೆ. (ಪೌರಾಣಿಕ ಕಥೆಯ ಪ್ರಕಾರ ಶಿವನು ಪಾರ್ವತಿಯ ಸಂಗ ಬಯಸಿ ಮೇಲಿನ ಬೆಟ್ಟದಿಂದ ಬಹಳ ಆತುರದಿಂದ ಇಳಿದು ಬರುತ್ತಾನೆ.
ಆದರೆ ಇಲ್ಲಿ ಬಂದು ತಲಪಿದಾಗ ಪಾರ್ವತಿಯು ರಜಸ್ವಲೆಯಾಗಿರುವುದು ತಿಳಿದು, ಅತೀ ವೇಗದಲ್ಲಿ ಆ ಕಡಿದಾದ ಬೆಟ್ಟವನ್ನು ಏರಿ ತನ್ನ ಸ್ಥಾನವನ್ನು ಸೇರುತ್ತಾನೆ. ಇದನ್ನು ಈಗಲೂ ಉತ್ಸವದ ಸಮಯದಲ್ಲಿ ಅರ್ಚಕರು ದೇವರ ವಿಗ್ರಹವನ್ನು ತಲೆಯಲ್ಲಿ ಹೊತ್ತುಕೊಂಡು ಕಡಿದಾದ ಬೆಟ್ಟವನ್ನು ಓಡಿಕೊಂಡೇ ಹೋಗುವುದು ನಡೆದುಕೊಂಡು ಬಂದಿದೆ.)
ಆಟಿ ಅಮವಾಸ್ಯೆ, ಶ್ರಾವಣ ಅಮವಾಸ್ಯೆಯೂ ವಿಶೇಷ
ತುಳು ಪರಂಪರೆಯ ಆಷಾಢ (ಆಟಿ) ಅಮವಾಸ್ಯೆ ಮತ್ತು ಸೋಣ (ಶ್ರಾವಣ) ಅಮವಾಸ್ಯೆಯಂದು ಇಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಮುಂಜಾನೆಯೇ ಅಸಂಖ್ಯಾತ ಭಕ್ತರು ಜಿಲ್ಲೆಯ ನಾನಾಕಡೆಗಳಿಂದ ಬಂದು ದೇವರ ಸೇವೆಯನ್ನು ಮಾಡುತ್ತಾರೆ.
ಬೆಟ್ಟದ ಮೇಲಿರುವ ದೇವಸ್ಥಾನ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ದೇವಸ್ಥಾನಗಳಲ್ಲಿ ಇದೊಂದು. ಇನ್ನೊಂದು ನರಹರಿ ಬೆಟ್ಟದ ಸದಾಶಿವ ದೇವಸ್ಥಾನ.
