ಸೋನಿಯಾ ಗಾಂಧಿ ಪರಮಾಪ್ತ ವಡಕ್ಕನ್ ಬಿಜೆಪಿಗೆ ಸೇರ್ಪಡೆ – Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ದೇಶಾದ್ಯಂತ ಪಕ್ಷಾಂತರಿಗಳೇ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಗುರುವಾರ ಹೊಸ ಸೇರ್ಪಡೆಯಾಗಿದೆ. ಕಾಂಗ್ರೆಸ್‌ಗೆ ತೀವ್ರ ಮುಜುಗರವೆಂಬಂತೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪರಮಾಪ್ತ ಮತ್ತು ಪಕ್ಷದ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಕೇರಳದ ಕಾಂಗ್ರೆಸ್‌ ನಾಯಕ ಟಾಮ್‌ ವಡಕ್ಕನ್‌ ಅವರು ದಿಢೀರನೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗುರುವಾರ ನಡೆದ ಈ ಬೆಳವಣಿಗೆಯು ಕಾಂಗ್ರೆಸ್‌ಗೆ ಆಘಾತ ತಂದಿದೆ.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪುಲ್ವಾಮಾ ಉಗ್ರ ದಾಳಿಯ ನಂತರ ಕೇಂದ್ರ ಸರಕಾರ ಕೈಗೊಂಡ ದಿಟ್ಟ ಕ್ರಮಗಳಿಗೆ ಕಾಂಗ್ರೆಸ್‌ ಸರಿಯಾದ ಸ್ಪಂದನೆ ನೀಡಲಿಲ್ಲ. ಶತ್ರು ದೇಶದ ಮೇಲಿನ ದಾಳಿ ವಿಷಯದಲ್ಲಿ ಕಾಂಗ್ರೆಸ್‌ನ ಲಘುವಾಗಿ ವರ್ತಿಸಿತು. ಇದರಿಂದ ನನ್ನ ಮನಸ್ಸಿಗೆ ತೀವ್ರ ನೋವಾಯಿತು. ಪಕ್ಷ ತೊರೆಯಲು ಇದೇ ಕಾರಣ,” ಎಂದರು.

ಇದೇ ವೇಳೆ, ರಾಹುಲ್‌ ಗಾಂಧಿ ನಾಯಕತ್ವದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ”ಎರಡು ದಶಕಗಳ ಕಾಲ ನಾನು ಆ ಪಕ್ಷಕ್ಕಾಗಿ ದುಡಿದಿದ್ದೇನೆ. ಅದಕ್ಕೆ ಪ್ರತಿಯಾಗಿ ಏನನ್ನೂ ಪಡೆಯಲಿಲ್ಲ. ಬಳಸಿಕೊಂಡು ಬಿಸಾಡುವ ಕೆಟ್ಟ ಸಂಪ್ರದಾಯವನ್ನು ಕಾಂಗ್ರೆಸ್‌ ಅನುಸರಿಸುತ್ತಿದೆ. ವಂಶಪಾರಂಪರ್ಯ ರಾಜಕಾರಣವೂ ಆ ಪಕ್ಷದಲ್ಲಿ ಮೇರೆ ಮೀರಿದೆ,” ಎಂದು ಟೀಕಿಸಿದರು.

ಬಿಜೆಪಿಗೆ ಸೇರ್ಪಡೆಯಾದ ಟಾಮ್‌ ವಡಕ್ಕನ್‌ ಮತ್ತು ಅರ್ಜುನ್‌ ಸಿಂಗ್‌, ಪುಲ್ವಾಮಾ ದಾಳಿ ಬಳಿಕ ತಮ್ಮ ತಮ್ಮ ಪಕ್ಷಗಳು ಮತ್ತು ನಾಯಕರು ನೀಡಿರುವ ಹೇಳಿಕೆಗಳಿಂದ ನೊಂದು ಪಕ್ಷ ತ್ಯಜಿಸಿರುವುದಾಗಿ ಹೇಳಿದ್ದಾರೆ.

ಟಾಮ್ ವಡಕ್ಕನ್ ಯಾರು?:
ಸೋನಿಯಾ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾಗ ಟಾಮ್ ವಡಕ್ಕನ್ ಅವರು ಮಾಧ್ಯಮ ಸಲಹೆಗಾರರಾಗಿದ್ದರು. ಈ ಮೂಲಕ ಸುಮಾರು 20 ವರ್ಷಗಳಿಂದ ಪಕ್ಷದಲ್ಲಿದ್ದು, ಸೋನಿಯಾ ಗಾಂಧಿ ಅವರ ನಿಕಟವರ್ತಿ ಹಾಗೂ ಕಾಂಗ್ರೆಸ್ ವಕ್ತಾರರಾಗಿ ಟಾಮ್ ಕೆಲಸ ಮಾಡಿದ್ದಾರೆ. ಆದರೆ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬರುತ್ತಿದ್ದಂತೆ ಹೊಸ ಮಾಧ್ಯಮ ಸಲಹಾ ತಂಡವನ್ನು ರಚಿಸಿಕೊಂಡರು. ಇದರಿಂದಾಗಿ ಟಾಮ್ ಕಡೆಗಣಿಸಲ್ಪಟ್ಟಿದ್ದರು. ಅಷ್ಟೇ ಅಲ್ಲದೇ ಕೇರಳದಿಂದ ಲೋಕಸಭೆ ಚುನಾವಣಾ ಕಣಕ್ಕೆ ಇಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಹಿಂದೇಟು ಹಾಕಿತ್ತು. ಈ ಎಲ್ಲ ಬೆಳವಣಿಗೆಯಿಂದಾಗಿ ಟಾಮ್ ಅವರು ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರಿದ್ದಾರೆ ಎನ್ನಲಾಗಿದೆ.