ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಕೇಳಿದ್ದೇನೆ: ಶಾಸಕ ರಘುಪತಿ ಭಟ್
ಉಡುಪಿ, : ‘‘ಹಲಸಿನ ಹಣ್ಣು ಹೆಚ್ಚು ತಿಂದರೆ ಏಡ್ಸ್ನಂತಹ ಕಾಯಿಲೆಗಳು ಬರುವುದಿಲ್ಲ ಮತ್ತು ಅದನ್ನು ಬಾರದಂತೆ ತಡೆಗಟ್ಟಬಹುದು. ಈ ವಿಚಾರವನ್ನು ಕೆಲವರು ಹೇಳಿದ್ದನು ನಾನು ಕೇಳಿದ್ದೇನೆ’’ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ಇದರ ಸಹಯೋಗ ದಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಹಲಸು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಲಸಿನ ಹಣ್ಣಿನ ಹುಳಿ, ಪದಾರ್ಥ ಮಾಡಿದರೆ ಮಧುಮೇಹಕ್ಕೆ ಒಳ್ಳೆಯದು ಎಂದು ನಾಟಿ ವೈದ್ಯರು ಹೇಳುತ್ತಾರೆ. ಇಂತಹ ಸುದ್ದಿಗಳಿಂದಲೇ ಹಲಸಿನ ಹಣ್ಣಿಗೆ ಇಂದು ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಅವರು ಹೇಳಿದರು.
ಮೇಳವನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕೆ.ಬಾಬು ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಅಶೋಕ್ ಕುಮಾರ್ ಕೊಡ್ಗಿ ಮೊದಲಾದವರು ಹಾಜರಿದ್ದರು.

