ಹಾಸನ : ಜೀಪ್ ಅಪಘಾತ: ಪ್ರೊಬೆಷನರಿ ಐಪಿಎಸ್ ಅಧಿಕಾರಿ ಸಾವು – vishwanews24
ಇಂದು DySP ಆಗಿ ಚಾರ್ಜ್ ತೆಗೆದುಕೊಳ್ಳಬೇಕಿದ್ದ ಅಪಘಾತದಲ್ಲಿ ಹರ್ಷವರ್ಧನ್ ದುರಂತ ಅಂತ್ಯ
ಹಾಸನ: ಚಾಲಕನ ನಿಯಂತ್ರ ತಪ್ಪಿ ಜೀಪ್ ರಸ್ತೆ ಬದಿಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ (26) ಚಿಕಿತ್ಸೆ ಫಲಕಾರಿಯಾಗದೆ ರವಿವಾರ (ಡಿಸೆಂಬರ್ 01) ರಾತ್ರಿ 9.30ರ ವೇಳೆಗೆ ಮೃತಪಟ್ಟಿದ್ದಾರೆ. ಹಾಸನ ತಾಲೂಕಿನ ಕಿತ್ತಾನೆಗಡಿ ಗ್ರಾಮದ ಬಳಿ ಜೀಪ್ ಪಲ್ಟಿಯಾಗಿತ್ತು. ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಕೊನೆಯುಸಿರು ಎಳೆದಿದ್ದಾರೆ.
ಮೂಲತಃ ಬಿಹಾರ ಮೂಲದ ಹರ್ಷಬರ್ಧನ ಮದ್ಯಪ್ರದೇಶದ ಸಿಂಗ್ರುಲಿಯಲ್ಲಿ ವಾಸವಾಗಿದ್ದರು. ಅಖಿಲೇಶ್ ಕುಮಾರ್ ಸಿಂಗ್ ಹಾಗೂ ಡೋಲಿ ಸಿಂಗ್ ದಂಪತಿಯ ಪುತ್ರ ಹರ್ಷವರ್ಧನ. ರಾಜ್ಯ ಆಡಳಿತ ಸೇವೆಯಲ್ಲಿರುವ ಸರ್ಕಾರಿ ನೌಕರನ ಮಗನಾಗಿದ್ದ ಹರ್ಷವರ್ಧನ್ ಸಿವಿಲ್ ಇಂಜಿನಿಯರಿಂಗ್ ಪದವಿಧರರಾಗಿದ್ದರು. ಸರ್ಕಾರಿ ಕೆಲಸಕ್ಕೂ ಸೇರಿಕೊಂಡಿದ್ದರು. ಆದರೆ, ಜೀವನದ ಗುರಿ ಬೇರೆಯೇ ಆಗಿತ್ತು. 2022ರಲ್ಲಿ ಮೊದಲ ಯತ್ನದಲ್ಲೇ ಯುಪಿಎಸ್ಸಿಯಲ್ಲಿ 153ನೇ ರ್ಯಾಂಕ್ ಪಡೆದಿದ್ದರು.
ಹರ್ಷವರ್ಧನ್ ಅವರು ಇಲಾಖಾ ತರಬೇತಿ ಮುಗಿಸಿ ನಾಲ್ಕು ವಾರ ಮೈಸೂರಿನ ಪೊಲಿಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಮುಗಿಸಿದ್ದರು. ನಂತರ, ಅವರು ಹಾಸನ ಜಿಲ್ಲೆಗೆ ಡಿವೈಎಸ್ಪಿಯಾಗಿ ನಿಯೋಜನೆಗೊಂಡಿದ್ದರು. ಹೀಗಾಗಿ ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಪೊಲೀಸ್ ಇಲಾಖೆಯ ಜೀಪ್ ಹತ್ತಿ ಮೈಸೂರಿನಿಂದ ಹಾಸನದತ್ತ ಬರುತ್ತಿದ್ದರು.
ಹಾಸನ ತಾಲ್ಲೂಕಿನ ಹಾಸನ ಮೈಸೂರು ರಸ್ತೆಯ ರಾಷ್ಟ್ರಿಯ ಹೆದ್ದಾರಿ 373ರ ಕಿತ್ತಾನೆಗಡಿ ಬಳಿ ಅತಿಯಾದ ವೇಗದಲ್ಲಿ ಬರುತ್ತಿದ್ದ ಜೀಪ್ ಸಂಜೆ 4:15ಕ್ಕೆ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದಿದ್ದು, ನಂತರ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ಅಪಘಾತದಲ್ಲಿ ಹರ್ಷವರ್ಧನ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೆ ಸ್ಥಳೀಯರು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ರಕ್ತಸ್ರಾವಾಗಿದ್ದರಿಂದ ಮತ್ತು ತಲೆಗೆ ಗಂಭಿರ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ.
