ಹಿಂದೂ ನಾಯಕರಿಗೆ ಯಾವುದೇ ಸಮಸ್ಯೆಯಾದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಕರಾವಳಿಯ ಹಿಂದೂ ಸಮಾಜ ಸಿದ್ಧವಿದೆ : ಬಿಜೆಪಿ ಮುಖಂಡ ಯಶಪಾಲ್‌ ಸುವರ್ಣ

Featured, ಉಡುಪಿ

ಉಡುಪಿ: ಹಿಂದೂ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್‌, ಶರಣ್‌ ಪಂಪ್‌ವೆಲ್‌ ಮತ್ತು ಜಗದೀಶ ಶೇಣವ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ವಿಷಯ ನಿಜಕ್ಕೂ ಅತಂಕಕಾರಿ. ರಾಜ್ಯ ಸರಕಾರ ಹಿಂದೂ ನಾಯಕರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಬಿಜೆಪಿ ಮುಖಂಡ ಯಶಪಾಲ್‌ ಸುವರ್ಣ ಆಗ್ರಹಿಸಿದ್ದಾರೆ.

ರಾಷ್ಟ್ರೀಯವಾದಿ, ಹಿಂದೂ ಪರ ಸಂಘಟನೆಗಳ ದಮನಕ್ಕೆ ವಿದೇಶಿ ಶಕ್ತಿಗಳ ಜತೆಗೆ ಇಲ್ಲಿನ ಕೆಲವು ಸಮಾಜಘಾತುಕರು ಕೈ ಜೋಡಿಸಿದ್ದು, ಇವರನ್ನು ಎದುರಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ. ಹಿಂದೂ ನಾಯಕರಿಗೆ ಯಾವುದೇ ಸಮಸ್ಯೆಯಾದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಕರಾವಳಿಯ ಹಿಂದೂ ಸಮಾಜ ಸಿದ್ಧವಿದೆ ಎಂದು ಅವರು ಎಚ್ಚರಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಕಾರಣ ನಿರ್ದಿಷ್ಟ ಸಮುದಾಯವೊಂದರ ಮತ ಕ್ರೋಡೀಕರಣಕ್ಕೆ ಮುಂದಾಗಿದೆ.ಈ ಹಿಂದೆಯೂ ಹಲವಾರು ಬಾರಿ ಚುನಾವಣೆಯ ಸಮಯದಲ್ಲಿ ಹಿಂದೂ ಮುಖಂಡರ ಹತ್ಯೆ ಯತ್ನ ನಡೆಸಿ ಕೋಮುಗಲಭೆ ಎಬ್ಬಿಸುವ ಹುನ್ನಾರ ನಡೆದಿತ್ತು. ಸಮಾಜದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವವರನ್ನು ಸರ್ಕಾರ ಮಟ್ಟ ಹಾಕಬೇಕು ಎಂದು ಯಶಪಾಲ್ ಒತ್ತಾಯಿಸಿದ್ದಾರೆ.

ದೇಶದ ಭದ್ರತಾ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದ್ದು, ರಾಷ್ಟ್ರಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಸಾಮರ್ಥ್ಯ‌ ನಮ್ಮ ಇಲಾಖೆಗಳಿಗಿದೆ. ಆದರೆ ದೇಶದ ಒಳಗಿದ್ದುಕೊಂಡು ಈ ರೀತಿಯ ಕಾರ್ಯಗಳಿಗೆ ಕುಮ್ಮಕ್ಕು ನೀಡುವ ದುಷ್ಕರ್ಮಿಗಳನ್ನು ನಿಗ್ರಹಿಸುವುದು ದೊಡ್ಡ ಸವಾಲಾಗಿದೆ. ರಾಜ್ಯ ಸರಕಾರ ಈ ವಿಚಾರದಲ್ಲಿ ತನ್ನ ತುಷ್ಟೀಕರಣ ನೀತಿಯನ್ನು ಪಕ್ಕಕ್ಕಿಟ್ಟು ಮತೀಯವಾದಿ ಶಕ್ತಿಗಳನ್ನು ಕಠಿಣ ಕ್ರಮದ ಮೂಲಕ ಹತ್ತಿಕ್ಕಬೇಕು ಎಂದು ಅವರು ಆಗ್ರಹಿಸಿದ್ದಾರೆ.