ಹೈಕೋರ್ಟ್ ವಕೀಲೆ ಚೈತ್ರಾಗೌಡ ಆತ್ಮಹತ್ಯೆ ಪ್ರಕರಣ : ತನಿಖೆ ಸಿಸಿಬಿಗೆ ವರ್ಗಾವಣೆ – vishwanews24

Featured, ರಾಜ್ಯ ನ್ಯೂಸ್

ಹೈಕೋರ್ಟ್ ವಕೀಲೆ ಚೈತ್ರಾಗೌಡ ಆತ್ಮಹತ್ಯೆ ಪ್ರಕರಣ : ತನಿಖೆ ಸಿಸಿಬಿಗೆ ವರ್ಗಾವಣೆ

ಬೆಂಗಳೂರು: ಇತ್ತೀಚೆಗೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೆಐಡಿಬಿ ಅಧಿಕಾರಿ ಶಿವಕುಮಾರ್ ಪತ್ನಿ ಹಾಗೂ ಹೈಕೋರ್ಟ್ ವಕೀಲೆ ಚೈತ್ರಾಗೌಡ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಈ ಪ್ರಕರಣ ತನಿಖೆಯನ್ನು ಸಿಸಿಬಿ  ವರ್ಗಾಯಿಸಿದ್ದಾರೆ.

ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗುತ್ತಿದ್ದಂತೆ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಚೈತ್ರಾ ಜೊತೆಗೆ ಮಾತನಾಡಿರುವ ವ್ಯಕ್ತಿಗಳ ಕಾಲ್ ಲಿಸ್ಟ್ ತೆಗೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ಚೈತ್ರಾ ಮೊಬೈಲ್ ಲಾಕ್ ಆಗಿದ್ದು, ಅದನ್ನು ಓಪನ್ ಮಾಡಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಅಲ್ಲದೇ ಚೈತ್ರಾ ಸಾವಿಗೂ ಹಿಂದಿನ 15 ದಿನಗಳ ಸಿಸಿಟಿವಿ ಪರಿಶೀಲನೆಗೆ ನಡೆಸುತ್ತಿದ್ದಾರೆ. ಸದ್ಯ ಚೈತ್ರಾ ಮರಣೋತ್ತರ ಪರೀಕ್ಷೆಯ ವರದಿಗಾಗಿ ಸಿಸಿಬಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಮೇ 11 ರಂದು ಚೈತ್ರಾಗೌಡ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ ನೋಟ್‍ನಲ್ಲಿ ಖಿನ್ನತೆಗೆ ಒಳಗಾಗಿದ್ದು, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿತ್ತು. ಅವರ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಬೆಂಗಳೂರು ವಕೀಲರ ಸಂಘದಿಂದ ಪೊಲೀಸ್ ಕಮಿಷನರ್ ಹಾಗೂ ಉತ್ತರ ವಿಭಾಗದ ಡಿಸಿಪಿಗೆ ಪತ್ರ ಬರೆದು ಚೈತ್ರಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಚೈತ್ರಾ ಕೇವಲ ವಕೀಲೆ ಅಷ್ಟೇ ಆಗಿರದೆ ಒಳ್ಳೆಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು. ಅಲ್ಲದೇ ಅತ್ಯಂತ ದಿಟ್ಟ ಮಹಿಳೆ ಹಾಗೂ ಧೈರ್ಯವಂತೆಯಾಗಿದ್ದರು ಎಂಬ ಮಾತುಗಳು ಅವರ ಬಗ್ಗೆ ಕೇಳಿಬಂದಿತ್ತು

Leave a Reply