15 ದಿನಗಳ ಕಾಲ ಗಡಿಯಲ್ಲಿ ಯೋಧರ ಜತೆ ಕಾರ್ಯನಿರ್ವಹಿಸಲಿರುವ ಧೋನಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಭಾರತೀಯ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಅಲಂಕರಿಸಿರುವ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ 15 ದಿನಗಳ ಕಾಲ ಯೋಧರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.

ಅವರು ಜುಲೈ 31ರಿಂದ 15 ದಿನಗಳ ಕಾಲ ಕಾಶ್ಮೀರದ ಗಡಿಯಲ್ಲಿ ಸೇನಾ ಸಮವಸ್ತ್ರ ಧರಿಸಿ ಗಸ್ತು ತಿರುಗಲಿದ್ದಾರೆ.

15 ದಿನಗಳ ಕಾಲ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಎಂ.ಎಸ್. ಧೋನಿಯವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಈ ಅವಧಿಯಲ್ಲಿ ಅವರು ಸೇನೆಯೊಂದಿಗೆ ಇದ್ದು, ಗಸ್ತು, ಕಾವಲು ಕರ್ತವ್ಯಗಳನ್ನು ಮಾಡಲಿದ್ದಾರೆ.

ಇನ್ನು ಈಗಾಗಲೇ ವಿಶ್ವಕಪ್ ಟೂರ್ನಿ ಮುಗಿದಿದ್ದು, ಈ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಸೇನೆಯಲ್ಲಿ ತರಬೇತಿ ಪಡೆಯಲು ಮುಂದಾಗಿದ್ದರು. ಹಾಗೂ ದೇಶ ಸೇವೆ ನಡೆಸಲು ನಿರ್ಧರಿಸಿದ್ದರು.

ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ ಧೋನಿ ಯೋಧರಂತೆಯೇ ದಿನಚರಿ ಆರಂಭಿಸುತ್ತಿದ್ದು, ಗಸ್ತು ತಿರುಗುವುದಕ್ಕೂ ಮೊದಲು ಸೇನಾ ತರಬೇತಿ ಪಡೆಯಲಿದ್ದಾರೆ. ಧೋನಿ ಸೇರಿರುವ ಬೆಟಾಲಿಯನ್ ‘106 ಟೆರಿಟೋರಿಯಲ್ ಆರ್ವಿು’ಯ ಮುಖ್ಯ ಕಚೇರಿ ಬೆಂಗಳೂರಿನಲ್ಲಿದ್ದರೂ ಅವರು ಗಡಿಯಲ್ಲಿ ಕಾರ್ಯನಿರ್ವಹಿಸಲು ತೆರಳಿದ್ದಾರೆ. 2011ರಲ್ಲಿ ಧೋನಿ, ಶೂಟರ್ ಅಭಿನವ್ ಬಿಂದ್ರಾ ಹಾಗೂ ವಿಜ್ಞಾನಿ ದೀಪಕ್ ರಾವ್​ಗೆ ಭಾರತೀಯ ಸೇನೆಯಿಂದ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಿ ಗೌರವಿಸಲಾಗಿತ್ತು.