2021 ನಾಗರ ಪಂಚಮಿ: ಇಲ್ಲಿದೆ ಪೂಜೆ ವಿಧಾನ ಮತ್ತು ಮಹತ್ವ -Vishwanews24
2021 ನಾಗರ ಪಂಚಮಿ: ಇಲ್ಲಿದೆ ಪೂಜೆ ವಿಧಾನ ಮತ್ತು ಮಹತ್ವ -Vishwanews24
ನಾಗರ ಪಂಚಮಿಯ ಹಬ್ಬವನ್ನು ಶ್ರಾವಣ ತಿಂಗಳಲ್ಲಿ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ನಾಗರ ಪಂಚಮಿಗೆ ವಿಶೇಷ ಮಹತ್ವವಿದೆ. ಈ ವರ್ಷ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 13 ರಂದು ಶುಕ್ರವಾರ ಆಚರಿಸಲಾಗುವುದು. ಈ ದಿನ ಜನರು ನಾಗದೇವತೆಯ ಜೊತೆಗೆ ಶಿವನನ್ನು ಪೂಜಿಸುತ್ತಾರೆ. ಧಾರ್ಮಿಕ ನಂಬಿಕೆಯ ಪ್ರಕಾರ, ಈ ದಿನ ನಾಗ ದೇವತೆಯನ್ನು ಪೂಜಿಸುವುದರೊಂದಿಗೆ ರುದ್ರಾಭಿಷೇಕ ಮಾಡುವ ವ್ಯಕ್ತಿಯು ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ. ನಾಗ ಪಂಚಮಿಯ ದಿನ ಹಾವುಗಳನ್ನು ಏಕೆ ಪೂಜಿಸಲಾಗುತ್ತದೆ ಮತ್ತು ಅದರ ಮಹತ್ವವೇನು..?
ಹಿಂದೂ ಪಂಚಾಂಗದ ಪ್ರಕಾರ, ಈ ಬಾರಿ ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿಯ ಪಂಚಮಿ ತಿಥಿ 12 ಆಗಸ್ಟ್ 2021 ರ ಗುರುವಾರ ಮಧ್ಯಾಹ್ನ 3:24 ರಿಂದ ಆರಂಭವಾಗಲಿದೆ.
ನಾಗರ ಪಂಚಮಿ ಮಹತ್ವ
ನಾಗರ ಪಂಚಮಿಯ ದಿನದಂದು 12 ದೇವ ಸರ್ಪಗಳಾದ ಅನಂತ, ವಾಸುಕಿ, ಶೇಷ, ಪದ್ಮ, ಕಂಬಲ, ಅಶ್ವತಾರ, ಶಂಖಪಾಲ, ಧೃತರಾಷ್ಟ್ರ, ತಕ್ಷಕ, ಕಾಳಿಂಗ ಮತ್ತು ಪಿಂಗಲವನ್ನು ಪೂಜಿಸಲಾಗುತ್ತದೆ. ಇದನ್ನು ಮಾಡುವುದರಿಂದ ಭಯವು ತಕ್ಷಣವೇ ಕೊನೆಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಇದರೊಂದಿಗೆ ‘ಓಂ ಕುರುಕುಲ್ಯೇ ಹಂ ಫಟ್ ಸ್ವಾಹಾ’ ಮಂತ್ರವನ್ನು ಪಠಿಸುವುದು ಲಾಭದಾಯಕವೆಂದು ಪರಿಗಣಿಸಲಾಗಿದೆ. ನಾಗಗಳ ಹೆಸರನ್ನು ನೆನಪಿಸಿಕೊಂಡರೆ ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ. ವರ್ಷದ ಹನ್ನೆರಡು ತಿಂಗಳು, ಈ ಪ್ರತಿಯೊಂದು ಸರ್ಪಗಳನ್ನು ಪೂಜಿಸಬೇಕು. ರಾಹು ಮತ್ತು ಕೇತುಗಳು ಜಾತಕದಲ್ಲಿ ದುರ್ಬಲರಾಗಿದ್ದರೆ ನಾಗರ ಪಂಚಮಿ ಪೂಜೆಯನ್ನು ಮಾಡಬೇಕು. ಹಾವನ್ನು ಸೇರಿದಂತೆ ದತ್ತಾತ್ರೇಯ ದೇವರನ್ನು ಪೂಜಿಸಲಾಗುತ್ತದೆ.
ನಾಗರ ಪಂಚಮಿ ಪೂಜೆ ವಿಧಾನ
1) ಹಸುವಿನ ಸಗಣಿಯಿಂದ ಎರಡು ನಾಗರ ಹಾವಿನ ಪ್ರತಿಮೆಯನ್ನು ಮಾಡಿ ಅದನ್ನು ನಿಮ್ಮ ಮನೆ ಬಾಗಿಲಿನ ಎರಡೂ ಬದಿಯಲ್ಲಿ ಇರಿಸಿ.
2) ನೀವು ಹಸುವಿನ ಸಗಣಿಯಿಂದ ತಯಾರಿಸಿದ ಪ್ರತಿಮೆಗೆ ಮೊಸರು, ಗರಿಕೆ, ಗಂಧ, ದರ್ಬೆ, ಅಕ್ಷತೆ, ಹೂ, ಮೋದಕ ಮತ್ತು ಮಾಲ್ಪುವಾ ಸೇರಿದಂತೆ ಇನ್ನಿತರ ವಸ್ತುಗಳನ್ನು ಅರ್ಪಿಸಿ.
3) ಈ ದಿನ ಬ್ರಾಹ್ಮಣರಿಗೆ ಆಹಾರವನ್ನು ನೀಡಿ ಮತ್ತು ನೀವು ಉಪವಾಸವನ್ನು ಕೈಗೊಳ್ಳುವುದು ಉತ್ತಮ. ಕೊರೊನಾ ಸಮಯದಲ್ಲಿ ಬ್ರಾಹ್ಮರಿಗೆ ಆಹಾರವನ್ನು ನೀಡುವುದು ಅಸಾಧ್ಯವಾದುದ್ದರಿಂದ ನೀವು ಆಹಾರವನ್ನು ತೆಗೆದುಕೊಂಡು ಹೋಗಿ ದೇವಾಲಯದಲ್ಲಿ ದಾನ ಮಾಡಬಹುದು.
4) ನಾಗರ ಪಂಚಮಿಯಂದು ದೇವಾಲಯಕ್ಕೆ ಹೋಗಿ ನಾಗಗಳಿಗೆ ಹಾಲಿನ ಅಭಿಷೇಕವನ್ನು ಮಾಡಬೇಕು.
5) ಸರ್ಪಗಳನ್ನು ಅಥವಾ ನಾಗರನ್ನು ಪೂಜಿಸುವಾಗ ಕಡ್ಡಾಯವಾಗಿ ಅರಶಿಣ ಅಥವಾ ಹಳದಿಯನ್ನು ಬಳಸಿ.
6) ನಾಗರ ಪಂಚಮಿ ದಿನದಂದು ಗೋಡೆಯ ಮೇಲೆ ಅರಶಿಣ ಅಥವಾ ಗಂಧದಿಂದ ಅನಂತ, ವಾಸುಕಿ, ಶೇಷ, ಪದ್ಮನಾಭ, ಕಾರ್ಕೋಟಕ, ಅಶ್ವ, ಧೃತರಾಷ್ಟ್ರ, ಶಂಕಪಾಲ, ಕಾಳಿ, ಮತ್ತು ತಕ್ಷಕ ಈ ಎಲ್ಲಾ ಸರ್ಪಗಳ ಹೆಸರುಗಳನ್ನು ಬರೆಯಬೇಕು.
7) ಕೆಲವೊಂದು ನಂಬಿಕೆಗಳ ಪ್ರಕಾರ, ನಾಗರ ಪಂಚಮಿ ದಿನದಂದು ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಬಾರದು ಮತ್ತು ಮನೆಯಲ್ಲೂ ಅಂದು ಕಬ್ಬಿಣದ ಪಾತ್ರೆಯಲ್ಲಿ ಆಹಾರವನ್ನು ತಯಾರಿಸಬಾರದು.
8) ನಾಗರ ಪಂಚಮಿಯಂದು ನೀವು ನಾಗರಿಗೆ ಗೋಧಿ, ಹಾಲು, ಬೇಳೆ, ಭತ್ತ ಅಥವಾ ಅಕ್ಕಿಯಿಂದ ತಯಾರಿಸಿದ ಪಾಯಸವನ್ನು ನಾಗರಿಗೆ ಅರ್ಪಿಸಬೇಕು.
ನಾಗರ ಪಂಚಮಿ ಮಂತ್ರ
”ಸರ್ವೇ ನಾಗಾಃ ಪ್ರಿಯಾಂತಂ ಮೇ ಯೇ ಕೇಚಿತ್ ಪೃಥ್ವೀತಲೇ|
ಯೇ ಚ ಹೆಲಿಮರೀಚಿಸ್ಥಾ ಯೇಂತರೇ ದೀವಿ ಸಂಸ್ಥಿತಾಃ||
ಯೇ ನದೀಷು ಮಹಾನಾಗಾ ಯೇ ಸರಸ್ವತಿಗಾಮಿನಃ|
ಯೇ ಚ ವಾಪೀತಡ್ಗೇಷು ತೇಷು ಸರ್ವೇಷು ವೈ ನಮಃ||”
”ಅನಂತಂ ವಾಸುಕಿ ಶೇಷಂ ಪದ್ಮನಾಭಂ ಚ ಕಂಬಲಂ|
ಶಂಖ ಪಾಲಂ ದೃತರಾಷ್ಟ್ರಂ ತಕ್ಷಕಂ ಕಾಳಿಯಂ ತಥಾ||
ಏತಾನಿ ನವ ನಾಮಾನು ನಾಗಾನಾಂ ಚ ಮಹಾತ್ಮನಾಂ|
ಸಾಯಂಕಾಲೇ ಪಠೇನಿತ್ಯಂ ಪ್ರಾತಃ ಕಾಲೇ ವಿಶೇಷತಃ|
ತಸ್ಯ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್||”
