2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಶಿ ತರೂರ್ನ್ನು ಪರಾಭವಗೊಳಿಸುತ್ತೇನೆ : ಶ್ರೀಶಾಂತ್ -Vishwanews24
ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಿರುವನಂತಪುರಂ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ನ್ನು ಪರಾಭವಗೊಳಿಸುತ್ತೇನೆ ಎಂದು ಕ್ರಿಕೆಟಿಗ ಎಸ್.ಶ್ರೀಶಾಂತ್ ಹೇಳಿದ್ದಾರೆ.
ನಾನು ಅವರ ದೊಡ್ಡ ಅಭಿಮಾನಿ. ಅವರು ನನ್ನ ಪರವಾಗಿ ನಿಂತಿದ್ದರು. ಆದರೆ ತಿರುವನಂತಪುರಂನಲ್ಲಿ ನಾನು ಚುನಾವಣೆ ಸ್ಪರ್ಧಿಸಿ ಅವರನ್ನು ಪರಾಭವಗೊಳಿಸುವೆ. ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಶ್ರೀಶಾಂತ್, ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
2013ರ ಐಪಿಎಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅಜಿತ್ ಚಂಡೀಲಾ, ಅಂಕಿತ್ ಚವಾಣ್ ಮತ್ತು ಶ್ರೀಶಾಂತ್ಗೆ ಬಿಸಿಸಿಐ ನಿಷೇಧ ಹೇರಿತ್ತು.
2019 ಮಾರ್ಚ್ 15ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು ಪಂದ್ಯಗಳಿಂದ ನಿಷೇಧ ಕಾಲಾವಧಿಯನ್ನು ಏಳು ವರ್ಷಕ್ಕೆ ಇಳಿಸಿತ್ತು. ಹಾಗಾಗಿ ಶ್ರೀಶಾಂತ್ ಮುಂದಿನ ವರ್ಷ ಆಡಬಹುದಾಗಿದೆ.
2016 ಮಾರ್ಚ್ನಲ್ಲಿ ಬಿಜೆಪಿ ಸೇರಿದ ಶ್ರೀಶಾಂತ್, ಕೇರಳದ ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂನಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
