22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವವರೆಗೆ ನಾನು ಮನೆಗೆ ಹೋಗುವುದಿಲ್ಲ : ಬಿಎಸ್​ವೈ – Vishwanews24

Featured, ರಾಜ್ಯ ನ್ಯೂಸ್

ಹಾವೇರಿ:ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಕರ್ನಾಟಕದ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು ವಿಜಯ ಕಹಳೆಯನ್ನು ಮೊಳಗಿಸಲು ಹೊರಟಿದೆ. ಹೀಗಾಗಿ ಈ ಕ್ಷೇತ್ರಗಳನ್ನು ಗೆಲ್ಲುವವರೆಗೆ ನಾನು ಮನೆಗೆ ಹೋಗುವುದಿಲ್ಲ ಎಂದು ಶಪಥ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ನರೇಂದ್ರ ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಗೆ ಸರಿಸಾಟಿಯಾದ ವ್ಯಕ್ತಿ ದೇಶದಲ್ಲಿ ಮತ್ತೊಬ್ಬರಿಲ್ಲ. ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು ಅಷ್ಟೇ ಸತ್ಯ ಎಂದು ಬಿಎಸ್​ವೈ ಭವಿಷ್ಯ ನುಡಿದರು.

ಹಣ ಬಲ, ತೋಳ್ಬಲ ಹಾಗೂ ಹೆಂಡದ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಕೆಲವರು ಭ್ರಮೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಜನರ ಪಾಲಿಗೆ ಬದುಕಿದೆಯಾ ಎಂಬ ಸಂಶಯ ಮೂಡತೊಡಗಿದೆ. ಬಂಡೀಪುರದಲ್ಲಿ ಮೂರು ದಿನಗಳಿಂದ ಕಾಡ್ಗಿಚ್ಚು ಸಂಭವಿಸಿ ಅರಣ್ಯವೆಲ್ಲ ನಾಶವಾಗುತ್ತಿದೆ. ಮಾಹಿತಿ ತಿಳಿದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸಬಹುದಿತ್ತು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಏರ್ ಶೋದಲ್ಲಿ ಬೆಂಕಿ ಬಿದ್ದಾಗಲೂ ಇವರ ಕೈಯಲ್ಲಿ ಬೆಂಕಿ ನಂದಿಸಲು ಆಗಲಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.