25 ವರ್ಷವಾದರೂ ರಾಮಮಂದಿರ ಕಟ್ಟಿದ್ರಾ : ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ

Featured, ರಾಜ್ಯ ನ್ಯೂಸ್

ಬೆಂಗಳೂರು : ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆಂಬ ಬಿಜೆಪಿ ಎಚ್ಚರಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ರಥಯಾತ್ರೆ ನಡೆಸಿ ಜನರಿಂದ ಸಂಗ್ರಹಿಸಿದ ಇಟ್ಟಿಗೆ ತಿಪ್ಪೆಗೆಸೆದ್ರಿ, ಹಣ ಜೇಬಿಗಿಳಿಸಿದ್ರಿ, 25 ವರ್ಷವಾದರೂ ರಾಮಮಂದಿರ ಕಟ್ಟಿದ್ರಾ’ ಎಂದು ಪ್ರಶ್ನಿಸಿದ್ದು ವಿಧಾನ ಪರಿಷತ್ತಿನಲ್ಲಿ ಕೆಲಕಾಲ ಕೋಲಾಹಲ ಸೃಷ್ಟಿಸಿತು.

ನಾಡಿನ ಮುಖ್ಯಮಂತ್ರಿಗಳು ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಮಾತನಾಡುವುದು ಸರಿಯಲ್ಲ. ರಾಮಮಂದಿರಕ್ಕೆ ಸಂಗ್ರಹಿಸಿದ ಇಟ್ಟಿಗೆಗಳು ತಿಪ್ಪೆಗೆ ಹೋದವು ಎಂಬ ಮಾತುಗಳನ್ನು ವಾಪಸ್ ಪಡೆಯಲೇಬೇಕು. ಸಂಗ್ರಹಿಸಿದ ಹಣ ಯಾರ ಖಾತೆಗೆ ಹೋಗಿದೆ ಎನ್ನುವುದರ ಕುರಿತು ದಾಖಲೆಗಳನ್ನು ಮುಖ್ಯಮಂತ್ರಿಗಳು ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಆಗ್ರಹಿಸಿದರು. 

ರಾಮ ಮಂದಿರ ಕಟ್ಟುವುದು ನಮ್ಮ ಅಜೆಂಡಾ. ಅದು ಇಂದಿಗೂ ಬಿಜೆಪಿಯಲ್ಲಿದೆ ನಾವು ಅದರಿಂದ ಎಂದಿಗೂ ಹಿಂದೆ ಸರಿದಿಲ್ಲ ಒಂದಷ್ಟು ಅಡೆತಡೆಗಳಿವೆ ಎಲ್ಲವನ್ನೂ ಪರಿಹರಿಸಿ ರಾಮ ಮಂದಿರವನ್ನು ಕಟ್ಟೇ ತೀರುತ್ತೇವೆ ಎಂದು ಶ್ರೀನಿವಾಸ ಪೂಜಾರಿ ಅವರು ವಿಧಾನ ಪರಿಷತ್ ನಲ್ಲಿ ಗುಡುಗಿದರು. ಇನ್ನು ಮುಖ್ಯಮಂತ್ರಿಗಳ ಮಾತಿಗೆ ಉತ್ತರಿಸಿದ ಬಿಜೆಪಿಯ ಹಿರಿಯ ಸದಸ್ಯ ಕೆ ಬಿ ಶಾಣಪ್ಪ ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿದೆ. ಅದು ಇತ್ಯರ್ಥವಾಗುವವರೆಗೂ ಯಾರಿಗೂ ಅಲ್ಲಿ ಮಂದಿರ ಕಟ್ಟಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಹೇಳಿಕೆ ವಾಪಸ್‌ ಪಡೆಯುವಂತೆ ಒತ್ತಾಯಿಸಿ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಬಳಿ ಧಾವಿಸಿ ಧರಣಿ ನಡೆಸಿದರೆ, ಕೊನೆಗೆ ಪ್ರತಿಪಕ್ಷದ ಒತ್ತಡಕ್ಕೆ ಮಣಿದ ಸಿಎಂ ಕುಮಾರಸ್ವಾಮಿ ತಮ್ಮ ಹೇಳಿಕೆ ವಾಪಸ್‌ ಪಡೆದ ಪ್ರಸಂಗವೂ ನಡೆಯಿತು.

”ನಿಮ್ಮಿಂದ ಬುದ್ದಿ ಹೇಳಿಸಿಕೊಂಡು ಅಥವಾ ಒತ್ತಡಕ್ಕೆ ಮಣಿದು ಸಾಲ ಮನ್ನಾ ಮಾಡುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸಾಲ ಮನ್ನಾ ಘೋಷಣೆಯಲ್ಲೂ ರಾಜಕೀಯ ಲಾಭ ಪಡೆಯಲು ಬಿಜೆಪಿ ಹೊರಟಿದೆ. ಆದರೆ, ಈ ಬಗ್ಗೆ ಜನರೇ ಸರಿಯಾದ ತೀರ್ಮಾನ ಕೈಗೊಳ್ಳುತ್ತಾರೆ. ಸಮ್ಮಿಶ್ರ ಸರಕಾರ ಟೇಕಾಫ್‌ ಆಗಿಲ್ಲ ಎಂಬ ಅಪನಂಬಿಕೆ ನಿಮಗಿರಬಹುದು. ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ ಜತೆ ಸೇರಿ ಅವಕಾಶವಾದಿ ರಾಜಕಾರಣ ಮಾಡುತ್ತಿಲ್ಲ. ಬದಲಿಗೆ ಹಿಂದಿನ ಕಾಂಗ್ರೆಸ್‌ ಸರಕಾರದ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ” ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.