80 ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಸುವ ಮುಸ್ಲಿಂ ಕುಟುಂಬ: ಕೋಮು ಸೌಹಾರ್ದ ಸಂದೇಶ ಸಾರುವ ಅಲ್ಲಾಬಕ್ಷ ಜಮಾದಾರ -Vishwanews24
80 ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಸುವ ಮುಸ್ಲಿಂ ಕುಟುಂಬ: ಕೋಮು ಸೌಹಾರ್ದ ಸಂದೇಶ ಸಾರುವ ಅಲ್ಲಾಬಕ್ಷ ಜಮಾದಾರ ..
ಇವರು ತಯಾರು ಮಾಡುವ ಗಣಪತಿ ಮೂರ್ತಿಗಳಿಗೆ ಗಡಿ ಭಾಗದಲ್ಲಿ ಭಾರಿ ಬೇಡಿಕೆ..
ಚಿಕ್ಕೋಡಿ: ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿರುವ ಮುಸ್ಲಿಂ ಕುಟುಂಬ ಗಡಿನಾಡಿನಲ್ಲಿ ಕೋಮು ಸೌಹಾರ್ದತೆ ಸಂದೇಶ ಸಾರುತ್ತಿದ್ದಾರೆ.
ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಎಂಬ ಪುಟ್ಟ ಗ್ರಾಮವೊಂದರಲ್ಲಿ ಅಲ್ಲಾಬಕ್ಷ ಜಮಾದಾರ ಎಂಬ ಮುಸ್ಲಿಂ ಕುಟುಂಬ ಕಳೆದ 80 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಸಿ ಗಡಿ ಭಾಗದಲ್ಲಿ ಹಿಂದೂ-ಮುಸ್ಲಿಂ ಕೋಮು ಸೌಹಾರ್ದ ಸಂದೇಶ ಸಾರುತ್ತಿದ್ದಾರೆ. ಗ್ರಾಮದ ಅಲ್ಲಾಬಕ್ಷ ಜಮಾದಾರ ಕುಟುಂಬ ಪ್ರತಿ ವರ್ಷ ನೂರಾರು ಗಣಪತಿ ಮೂರ್ತಿ ತಯಾರಿಸಿ ಭಕ್ತಾಧಿಗಳಿಗೆ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ.
ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿರುವ ಅಲ್ಲಾಬಕ್ಷ ಜಮಾದಾರ ಅವರು ತಮ್ಮ ಬಿಡುವಿನ ಸಮಯದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಜಾತಿ-ಭೇದಭಾವ ಬದಿಗಿಟ್ಟು ತಲೆಗೆ ಟೋಪಿ ಧರಿಸಿ ಝಗಮಗಿಸುವ ಬಣ್ಣ ಬಣ್ಣಗಳಿಂದ ವಿಘ್ನೇಶ್ವರ ಮೂರ್ತಿ ತಯಾರಿಸುತ್ತಿದ್ದಾರೆ.
ಜಮಾದಾರ ಕುಟುಂಬ ತಯಾರು ಮಾಡುವ ಗಣಪತಿ ಮೂರ್ತಿಗಳಿಗೆ ಗಡಿ ಭಾಗದಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಚಿಕ್ಕೋಡಿ ತಾಲೂಕಿನ ಮಾಂಜರಿ, ಯಡೂರ, ಯಡೂರವಾಡಿ, ಶಿರಗುಪ್ಪಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಗಣೇಶ ಮೂರ್ತಿಗಳನ್ನು ಪೂಜೆಗೆ ತೆಗೆದುಕೊಂಡು ಹೋಗುತ್ತಾರೆ. ಪ್ರಸಕ್ತ ವರ್ಷದಲ್ಲಿ ಜಮಾದಾರ ಕುಟುಂಬ ಸುಮಾರು 250ರಿಂದ 300 ಗಣೇಶ ಮೂರ್ತಿಗಳನ್ನು ತಯಾರಿಸಿದ್ದು, ಗಣೇಶ ಚೌತಿ ಹಬ್ಬದ ಮುನ್ನಾ ದಿನ ಗಣೇಶ ಮೂರ್ತಿಗಳ ಅಂತಿಮ ಕೆಲಸ ಮುಕ್ತಾಯವಾಗಲಿದೆ. ಒಟ್ಟಾರೆಯಾಗಿ ಜಾತಿ ಧರ್ಮ ಎಂದು ಬಡಿದಾಡುವರ ನಡುವೆ ಜಮಾದಾರ ಕುಟುಂಬ ಸಮಾಜಕ್ಕೆ ಮಾದರಿಯಾಗಿದ್ದಾರೆ.
