BIG BREAKING NEWS : VIDEO ಮಲ್ಪೆ ಬೀಚ್‍ಗೆ ಬಾಂಬ್ ಹಾಕಿ ಸ್ಪೋಟಿಸುವುದಾಗಿ ಬೆದರಿಕೆ ವಿಡಿಯೋ ಮಾಡಿ ಹಾಕಿದ್ದ ಯುವಕನ ಬಂಧನ

Featured, ಉಡುಪಿ
ಉಡುಪಿ,  ‘ಪಾಕಿಸ್ತಾನ ಝಿಂದಾಬಾದ್’ ಎಂದು ಘೋಷಣೆ ಕೂಗಿ ಮಲ್ಪೆ ಬೀಚ್‌ನಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆಯೊಡ್ಡಿರುವ ವೀಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಮಲ್ಪೆ ತೊಟ್ಟಂ ಬಾಜಲ್ ಬಾರ್ ಬಳಿಯ ನಿವಾಸಿ ಶೇಖರ್ ಎಂಬವರ ಪುತ್ರ ಸೃಜನ್ ಪೂಜಾರಿ(18) ಬಂಧಿತ ಆರೋಪಿ. ಈತ ನಿನ್ನೆ ಅರ್ಧ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹಿಂದಿಯಲ್ಲಿ ಮಾತನಾಡುತ್ತಾ, ‘ಪಾಕಿಸ್ತಾನ ಜಿಂದಾಬಾದ್’ ನಮ್ಮ ಮುಂದಿನ ಗುರಿ ಮಲ್ಪೆ ಬೀಚ್. ಅಲ್ಲಿ ಬಹಳ ದೊಡ್ಡ ಮಟ್ಟದ ಬಾಂಬ್ ಸ್ಫೋಟ ಮಾಡುತ್ತೇವೆ. ಅಲ್ಲಿಯವರು ಕೆಟ್ಟವರು. ಇದರಿಂದ ರಸ್ತೆಯಲ್ಲೇ ಅಂಗಡಿ ಇಟ್ಟುಕೊಂಡವರು ಕೂಡ ಸಾಯುತ್ತಾರೆ’’ ಎಂದು ವೀಡಿಯೋದಲ್ಲಿ ತಯಾರಿಸಿದ್ದನು. ಈ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಇಂದು ಬೆಳಗ್ಗೆ ಸಚಿನ್ ಎಂಬವರು ಮಲ್ಪೆ ಠಾಣೆಗೆ ಬಂದು ಪೊಲೀಸರಿಗೆ ವೀಡಿಯೋ ಮಾಹಿತಿ ನೀಡಿದ್ದು, ಅದರಲ್ಲಿ ಆರೋಪಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆಯನ್ನು ಕೂಗುತ್ತ ಮಲ್ಪೆ ಬೀಚ್‌ನಲ್ಲಿ ಬಾಂಬ್ ಹಾಕಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವುದು ಕಂಡುಬಂದಿತ್ತು. ಈ ವೀಡಿಯೊ ತುಣುಕನ್ನು ಆಧರಿಸಿ ಮಲ್ಪೆ ಠಾಣಾಧಿಕಾರಿ ಮಧು ಆರೋಪಿಯ ವಿರುದ್ಧ ಕಲಂ 153(ಎ), 505(2) ಐಪಿಪಿಯಂತೆ ಪ್ರಕರಣ ದಾಖಲಿಸಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದರು. ಉಡುಪಿ ಮಹಿಳಾ ಠಾಣೆಯ ನಿರೀಕ್ಷಕ ಸಂಪತ್ ಕುಮಾರ್, ಮಲ್ಪೆ ಠಾಣಾಧಿಕಾರಿ ಮಧು ಹಾಗೂ ಸಿಬ್ಬಂದಿ ತನಿಖೆ ಕೈಗೆತ್ತಿಕೊಂಡು ಆರೋಪಿಯ ಶೋಧ ಕಾರ್ಯ ಆರಂಭಿಸಿದರು. ಮಲ್ಪೆ ಬೀಚ್ ಪರಿಸರದಲ್ಲಿ ಅಂಗಡಿ ನಡೆಸುತ್ತಿದ್ದ ನೇಪಾಲ ಮೂಲದ ವ್ಯಕ್ತಿಯೊಬ್ಬನನ್ನು ವಿಚಾರಿಸಿದಾಗ ಈ ವೀಡಿಯೋ ನನಗೆ ಸೃಜನ್ ಎಂಬಾತ ಕಳುಹಿಸಿರುವುದಾಗಿ ಮಾಹಿತಿ ನೀಡಿದನು. ಅದರಂತೆ ಸೃಜನ್‌ನನ್ನು ಮನೆಯಲ್ಲಿ ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಆಗ ಆತ ತಾನೇ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡನು. ಕೂಡಲೇ ಆತನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
‘‘ಈತ ಮನೆಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದಕ್ಕೆ ಮನೆಯವರು ಬೈಯುತ್ತಿದ್ದರು. ಇದೇ ಕಾರಣದಿಂದ ಮನನೊಂದ ಆತ ಬುದ್ಧಿ ಕಲಿಸಲು ಮನೆ ಸಮೀಪದ ಬೀಚ್ ಬಳಿ ಈ ವೀಡಿಯೋ ತಯಾರಿಸಿದ್ದಾನೆ. ಈತ ಮನೆಯಲ್ಲಿ ಕುರಿ ಸಾಕುವ ಕೆಲಸ ಮಾಡಿಕೊಂಡಿದ್ದಾನೆ. ಈತನಿಂದ ಮೊಬೈಲ್ ಫೋನ್ ಹಾಗೂ ಟವೆಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ’’ ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಕೃತ್ಯದ ಹಿಂದೆ ಗಲಭೆ ಸೃಷ್ಟಿಸುವ ಉದ್ದೇಶ?
ಸೃಜನ್ ಪೂಜಾರಿಯ ಬಾಂಬ್ ಸ್ಫೋಟದ ಬೆದರಿಕೆ ಹಿಂದೆ ಮಲ್ಪೆ ಪರಿಸರದಲ್ಲಿ ಗಲಭೆ ಸೃಷ್ಟಿಸುವ ಉದ್ದೇಶ ಇತ್ತು ಎಂಬ ಮಾಹಿತಿ ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಅದಕ್ಕಾಗಿ ಸೃಜನ್ ಪೂಜಾರಿ, ಭಾರತ – ಪಾಕಿಸ್ತಾನ ನಡುವಿನ ಯುದ್ಧದ ಭೀತಿಯ ವಾತಾವರಣದ ಲಾಭ ಪಡೆದಿದ್ದನು. ಅಲ್ಲದೆ ವೀಡಿಯೋದಲ್ಲಿ ಉದ್ದೇಶಪೂರ್ವಕವಾಗಿ ಹಿಂದಿ ಭಾಷೆಯನ್ನು ಬಳಸಿಕೊಂಡಿದ್ದನು ಎಂದು ತಿಳಿದುಬಂದಿದೆ.