MLA ಟಿಕೆಟ್ ವಂಚನೆ ಕೇಸ್ :  ಸೆ.23 ರವರೆಗೆ ಚೈತ್ರಾ ಕುಂದಾಪುರ ಸಿಸಿಬಿ ಕಸ್ಟಡಿಗೆ – Vishwanews24

Featured, ಉಡುಪಿ, ರಾಜ್ಯ ನ್ಯೂಸ್

MLA ಟಿಕೆಟ್ ವಂಚನೆ ಕೇಸ್ :  ಸೆ.23 ರವರೆಗೆ ಚೈತ್ರಾ ಕುಂದಾಪುರ ಸಿಸಿಬಿ ಕಸ್ಟಡಿಗೆ

ಬೆಂಗಳೂರು:ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರ ಬಳಿ 5 ಕೋಟಿ ರೂ. ಪಡೆದು ವಂಚನೆ ಕೇಸ್​ಗೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್‌ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್​ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್, ಪ್ರಧಾನಿ ಕಚೇರಿ ಹಾಗೂ ಆರೆಸ್ಸೆಸ್ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ ಆರೋಪದಲ್ಲಿ ಹಿಂದೂ ಸಂಘಟನೆಯ ನಾಯಕಿ ಚೈತ್ರಾ ಕುಂದಾಪುರ, ಬಿಜೆಪಿ ನಾಯಕ ಗಗನ್ ಕಡೂರು ಗ್ಯಾಂಗನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.

ನಕಲಿ ಆರೆಸ್ಸೆಸ್ ಪ್ರಚಾರಕರನ್ನು ಸೃಷ್ಟಿಸಿ ಬಿಜೆಪಿ ರಾಜ್ಯ ನಾಯಕರನ್ನೇ ವಂಚಿಸಿದ ಆರೋಪ ಚೈತ್ರಾ ಕುಂದಾಪುರ ಮೇಲಿದೆ. ತನ್ನ ವಾಕ್ಚಾತುರ್ಯ ಮೂಲಕ ಹಿಂದೂ ಕಾರ್ಯಕರ್ತರ ಮುಗ್ದತೆಯನ್ನು ಬಳಸಿ, ಬಿಜೆಪಿ ಟಿಕೆಟ್ ಕೊಡುವುದಾಗಿ ನಂಬಿಸಿದ್ದ ಚೈತ್ರಾ ಕುಂದಾಪುರ, ಬಿಜೆಪಿ ಯುವಮೋರ್ಚಾ ನಾಯಕ ಗಗನ್ ಕಡೂರು, ಉತ್ತರ ಕರ್ನಾಟಕದ ಹಾಲಶ್ರೀ ಸ್ವಾಮೀಜಿ ಸಹಿತ 7 ಮಂದಿಯ ವಿರುದ್ದ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ನಾಯಕರಾದ ಗೋವಿಂದ ಬಿ.ಪೂಜಾರಿ ಅವರು ಈ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದ್ದಾರೆ. ಕಳೆದೆರಡು ದಿನಗಳಿಂದ ಆರೋಪಿಗಳಿಗಾಗಿ ಬಲೆ ಬೀಸಿದ್ದ ಸಿಸಿಬಿ ಪೊಲೀಸರು ಮಂಗಳವಾರ ಗಗನ್ ಕಡೂರು ಅನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು.

ಈ ಮಧ್ಯೆ ರಾತ್ರಿ ಚೈತ್ರಾ ಕುಂದಾಪುರ ಸಹಿತ ಮತ್ತೆ ಮೂವರನ್ನು ಸಿಸಿಬಿ ತಂಡ ಬಂದಿಸಿ ಬೆಂಗಳೂರಿಗೆ ಕರೆತಂದಿದೆ. ಈ ಮೂಲಕ ಸುಪ್ರೀಂ ಕೋರ್ಟ್, ಪ್ರಧಾನಿ ಕಚೇರಿ ಹೆಸರಿನಲ್ಲಿ ವಂಚನೆಗೆ ತೊಡಗಿದ್ದಂತ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ಅಂದರ್ ಆದಂತೆ ಆಗಿದೆ.

Leave a Reply