RSS ಸಂಸ್ಥಾಪಕ ಹೆಡಗೇವಾರ್ ಪಠ್ಯ ಕೈಬಿಡುವುದಿಲ್ಲ: ಸಿಎಂ ಬೊಮ್ಮಾಯಿ – Vishwnaews24

Featured, ರಾಜ್ಯ ನ್ಯೂಸ್

ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರ್ ಪಠ್ಯ ಕೈಬಿಡುವುದಿಲ್ಲ: ಸಿಎಂ ಬೊಮ್ಮಾಯಿ

ಚಿತ್ರದುರ್ಗ: ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರಿಗೆ ಸಂಬಂಧಿಸಿದ ಪಠ್ಯವನ್ನು ಕೈಬಿಡುವುದಿಲ್ಲ. ಅವರ ಪಠ್ಯ ಇದ್ದರೆ ತಪ್ಪೇನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಹಿತ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿದೆ.

ಹೀಗಾಗಿ ಅದನ್ನು ವಿಸರ್ಜನೆ ಮಾಡಲಾಗಿದೆಯೇ ಹೊರತು ರದ್ದು ಮಾಡಿಲ್ಲ. ಹೊಸ ಸಮಿತಿ ರಚನೆಯ ಅವಶ್ಯಕತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಪಠ್ಯಪುಸ್ತಕ ವಿಚಾರದಲ್ಲಿ ಚರ್ಚೆ ನಡೆದ ಬಳಿಕ ಪರಿಶೀಲಿಸುವುದಾಗಿ ಆರಂಭದಲ್ಲೇ ಹೇಳಿದ್ದೆ. ವಾಸ್ತವಾಂಶದ ಆಧಾರದ ಮೇರೆಗೆ ಕೆಲ ಬದಲಾವಣೆ ಮಾಡಲಾಗುತ್ತಿದೆ. ಮಠಾಧೀಶರ ಒತ್ತಡಕ್ಕೆ ಮಣಿದು ಈ ತೀರ್ಮಾನ ಕೈಗೊಂಡಿಲ್ಲ’ ಎಂದು ಹೇಳಿದರು.

‘ಪಠ್ಯಪುಸ್ತಕವನ್ನು ನಾನೂ ಗಮನಿಸಿರಲಿಲ್ಲ. ಶುಕ್ರವಾರ ಪಠ್ಯಪುಸ್ತಕ ಪರಿಶೀಲನೆ ಮಾಡಿದೆ. ಬರಗೂರು ರಾಮಚಂದ್ರಪ್ಪ ಸಮಿತಿ ರಚಿಸಿದ್ದ ಪಠ್ಯಕ್ಕೂ ಪರಿಷ್ಕೃತ ಪಠ್ಯಕ್ಕೂ ಒಂದು ವಾಕ್ಯ ಮಾತ್ರ ವ್ಯತ್ಯಾಸವಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅವರು ಪ್ರಶ್ನಿಸಿದ ಲಿಂಗದೀಕ್ಷೆ ಬರಗೂರು ಸಮೀತಿಯ ಪಠ್ಯದಲ್ಲಿಯೇ ಇತ್ತು. ಇದನ್ನು ಮಠಾಧೀಶರಿಗೆ ಮನವರಿಕೆ ಮಾಡಿಕೊಡಲಾಗಿದೆ’ ಮದು ಹೇಳಿದರು.

‘ನಮ್ಮದು ಬಸವ ಪಥದ ಸರ್ಕಾರ ಎಂದು ಮೊದಲೇ ಹೇಳಿದ್ದೇನೆ. ಬಸವಣ್ಣನವರು ರಚಿಸಿದ ಹಲವಾರು ಅತ್ಯುತ್ತಮ ವಚನಗಳು ಪಠ್ಯದಲ್ಲಿವೆ. ಆದಷ್ಟು ಶೀಘ್ರದಲ್ಲಿ ಮಕ್ಕಳಿಗೆ ಪರಿಷ್ಕೃತ ಪಠ್ಯ ಪುಸ್ತಕ ಒದಗಿಸುತ್ತೇವೆ’ ಎಂದರು.

ರಾಜ್ಯದಾದ್ಯಂತ ಚಡ್ಡಿ ಸುಡುವ ಪ್ರತಿಭಟನೆ ನಡೆಸುತ್ತೇವೆ : ಸಿದ್ದರಾಮಯ್ಯ – Vishwnaews24

Leave a Reply