ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಗಡಿಪಾರು -Vishwanews24

Featured, ದೇಶ

ಚೆನ್ನೈ,: ಯಾವುದೇ ಸೂಕ್ತ ಪ್ರಯಾಣ ದಾಖಲೆಗಳಿಲ್ಲದೆ ಗುರುವಾರ ಬೆಳಗ್ಗೆ ಬೋಟ್‌ನ ಮೂಲಕ ಚೆನ್ನೈನ ಬಂದರ್‌ಗೆ ಪ್ರವೇಶಿಸಿದ್ದ ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಅಬ್ದುಲ್ ಗಫೂರ್‌ರನ್ನು ಶನಿವಾರ ಬೆಳಗ್ಗೆ ಅವರ ದೇಶಕ್ಕೆ ಗಡಿಪಾರು ಮಾಡಲಾಗಿದೆ.

ತನಗೆ ರಾಜಕೀಯ ಆಶ್ರಯ ನೀಡಿ ಎಂಬ ಗಫೂರ್ ಮನವಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಬಳಿಕ ತಮಿಳುನಾಡು ಸರಕಾರ ಅವರನ್ನು ಗಡಿಪಾರು ಮಾಡಿರುವುದಾಗಿ ಹೇಳಿದೆ.

ಯಾವುದೇ ಅಧಿಕೃತ ದಾಖಲೆ ಇಲ್ಲದೇ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಸಿಂಗಾಪುರ ನೋಂದಣಿಯ ನೌಕೆಯಲ್ಲಿ ಆಗಮಿಸಿದ್ದ ವೇಳೆ ಟ್ಯುಟಿಕಾರಿನ್ ಪೊಲೀಸರು ಬಂಧಿಸಿ, ಸರಕು ಸಾಗಣೆಯ ನೌಕೆಯಲ್ಲಿಯೇ ಇರಿಸಿದ್ದರು. ಹಣ ದುರುಪಯೋಗದ ಆರೋಪ ಎದುರಿಸುತ್ತಿದ್ದ ಅಹ್ಮದ್ ದೇಶ ಬಿಟ್ಟು ತೆರಳದಂತೆ ಮಾಲ್ಡೀವ್ಸ್ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

ವಿರ್ಗೊ-9 ಬೋಟ್‌ನಲ್ಲಿ ಆಗಮಿಸಿದ್ದ ಅಹ್ಮದ್ ಅದೀಬ್ ಹಾಗೂ ಬೋಟ್‌ನಲ್ಲಿದ್ದ ಇತರ 9 ಸಿಬ್ಬಂದಿಯನ್ನು ಅಂತರ್‌ರಾಷ್ಟ್ರೀಯ ಕಡಲ ಗಡಿರೇಖೆಯಲ್ಲಿ ಮಾಲ್ಡೀವ್ಸ್‌ನ ಭದ್ರತಾ ಸಿಬ್ಬಂದಿಗೆ ಭಾರತೀಯ ತಟ ರಕ್ಷಕ ಪಡೆಯ ಸಿಬ್ಬಂದಿ ಹಸ್ತಾಂತರಿಸಿದೆ,

ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಅದೀಬ್ ಹೇಗೆ ಪಲಾಯನ ಮಾಡಿದರು, ಅವರಿಗೆ ಯಾರ್ಯಾರು ನೆರವಾದರು ಎಂಬ ಬಗ್ಗೆ ಮಾಲ್ದೀವ್ಸ್ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

ಜುಲೈ 11ರಂದು ವಿರ್ಗೋ ಎಂಬ ದೋಣಿ ಮಾಲ್ಡೀವ್ಸ್ ಗೆ ಸರಕುಗಳನ್ನು ತೆಗೆದುಕೊಂಡು ಹೋಗಿತ್ತು. ನಂತರ ಅಲ್ಲಿಂದ ಜುಲೈ 28ರಂದು ಮರಳುವಾಗ ಅಹ್ಮದ್ ಅದೀಬ್ ತನಗೆ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಹೇಳಿ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದ. ಈ ಹಡಗಿನಲ್ಲಿ ಎಂಟು ಮಂದಿ ಇಂಡೋನೇಷಿಯನ್ನರು ಮತ್ತು ಒಬ್ಬರು ಭಾರತೀಯ ಸೇರಿ ಒಂಬತ್ತು ಹಡಗಿನ ಸಿಬ್ಬಂದಿ ಇದ್ದರು.