ಅದು ತಾಜ್ ಮಹಲ್ ಅಲ್ಲ, ಶಿವ ದೇವಾಲಯ, ಅದು ಶಿವಮಂದಿರವಾಗಲು ಅದನ್ನು ಕೆಡವಿ ಹಾಕಿ: ಅಜಂ ಖಾನ್ ಹೇಳಿಕೆ..
ತಾಜ್ ಮಹಲ್ ವಿಶ್ವ ಪ್ರಸಿದ್ಧವಾದ ಸ್ಮಾರಕ. ದೇಶ ವಿದೇಶಗಳಿಂದ ಲಕ್ಷಾಂತರ ಜನ ಪ್ರವಾಸಿಗರನ್ನು ಆಕರ್ಷಿಸುವ ತಾಣ ತಾಜ್ ಮಹಲ್. ಆಗ್ರಾದಲ್ಲಿರುವ ತಾಜ್ ಮಹಲ್ ನ ಇತಿಹಾಸದ ಕುರಿತು ಹಲವಾರು ವರ್ಷಗಳಿಂದ ವಿವಾದಗಳಿವೆ. ಕೆಲವರು ಅದನ್ನು ಮಮತಾಜ್ ಗಾಗಿ ಶಹಜಹಾನ್ ಕಟ್ಟಿಸಿದ್ದ ಎಂದರೆ ಇನ್ನು ಕೆಲವರು ಅದು ಹಿಂದೂ ದೇವಾಲಯವಾಗಿತ್ತು ಎಂದು ವಾದಿಸುತ್ತಾರೆ. ತಾಜ್ ಮಹಲ್ ಒಂದು ಶಿವ ದೇವಾಲಯವಾಗಿತ್ತು, ಅದನ್ನು ಆನಂತರ ತಾಜ್ ಮಹಲ್ ನ್ನಾಗಿ ಶಹಜಹಾನ್ ಬದಲಾಯಿಸಿದ್ದಾನೆ ಎಂದು ಹಲವಾರು ಇತಿಹಾಸಕಾರರು ವಾದಿಸುತ್ತಾರೆ. ಈಗಲೂ ತಾಜ್ ಮಹಲ್ ನ ಇತಿಹಾಸದ ಕುರಿತಾಗಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಹಾಗಾಗಿ ತಾಜ್ ಮಹಲ್ ಕುರಿತು ಅನೇಕರು ಆಗಾಗ್ಗೆ ಹೇಳುವ ಹೇಳಿಕೆಗಳು ಸುದ್ದಿಯಾಗಿ ತಾಜ್ ಮಹಲ್ ನ ಇತಿಹಾಸದ ಕುರಿತು ಮತ್ತಷ್ಟು ಕುತೂಹಲ ಮೂಡುವಂತೆ ಮಾಡುತ್ತದೆ.
ಇದೀಗ ಸಮಾಜವಾದಿ ಪಕ್ಷದ ಅಜಂ ಖಾನ್ ನೀಡಿರುವ ಹೇಳಿಕೆ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ತಾಜ್ ಮಹಲ್ ಒಂದು ಶಿವದೇವಾಲಯ. ಅದನ್ನು ಕೆಡವಿ ಹಾಕಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ತಾಜ್ ಮಹಲ್ ಅನ್ನು ಕೆಡವಿ ಹಾಕಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸೂಚಿಸಿದ್ದಾರೆ. ಜೊತೆಗೆ ಯೋಗಿ ಆದಿತ್ಯನಾಥ್ ಏನಾದರೂ ತಾಜ್ ಮಹಲ್ ಅನ್ನು ಕೆಡವಲು ಮುಂದಾದರೆ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.
ತಾಜ್ ಮಹಲ್ ಅನ್ನು ನಾಶ ಮಾಡಲೇಬೇಕು. ಈ ವಿಷಯದಲ್ಲಿ ಯೋಗಿ ಆದಿತ್ಯನಾಥ್ ರವರಿಗೆ ನಾನು ಹೆಗಲಿಗೆ ಹೆಗಲು ಕೊಟ್ಟು ಸಾಗುತ್ತೇನೆ. ಯೋಗಿ ಆದಿತ್ಯನಾಥ್ ಅವರು ತಾಜ್ ಮಹಲ್ ನ್ನು ಶಿವ ಮಂದಿರ ಎಂಬ ಬಗ್ಗೆ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿದ್ದಾರೆ. “ತಾಜ್ ಮಹಲ್ ನ್ನು ಶಿವ ಮಂದಿರ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿ ಮುಂದಾಳತ್ವ ವಹಿಸಿದರೆ ನಾನೂ ಅವರೊಂದಿಗೆ ತೆರಳಿ ತಾಜ್ ಮಹಲ್ ನ್ನು ಧ್ವಂಸ ಮಾಡುವ ಕೆಲಸದಲ್ಲಿ ಜೊತೆಯಾಗುತ್ತೇನೆ, ಶಿವ ಮಂದಿರ ಶಿವಮಂದಿರವಾಗಲು ನಾನು ಮುಸ್ಲಿಮನಾಗಿದ್ದರೂ 20,000 ಕ್ಕೂ ಅಧಿಕ ಮುಸ್ಲಿಮರನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ಅಜಂ ಖಾನ್ ತಾಜ್ ಮಹಲ್ ಅನ್ನು ಗುಲಾಮಗಿರಿಯ ಸಂಕೇತ ಎಂದು ಬಣ್ಣಿಸಿದ್ದರು.
