ಅನರ್ಹ ಶಾಸಕರ ಮೇಲೆ ಅನಗತ್ಯ ಆರೋಪ ಮಾಡುವುದು ಸರಿಯಲ್ಲ : ಶಿವರಾಮ್ ಹೆಬ್ಬಾರ್ -Vishwanews24
ಬೆಂಗಳೂರು : ಅನರ್ಹ ಶಾಸಕರ ಮೇಲೆ ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಪಕ್ಷವನ್ನು ಬಿಡಲು ಕೋಟಿಗಟ್ಟಲೆ ಹಣ ಪಡೆಯಲಾಗಿದೆ ಎಂದು ಹೇಳುವ ಸಿದ್ದರಾಮಯ್ಯನವರು ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.
ಅಧಿಕಾರ ಬಿಡಲು ಸಿದ್ಧವಾಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬೇಜವಾಬ್ದಾರಿ ಹೇಳಿಕೆ ನೀಡುವುದು ಸಿದ್ದರಾಮಯ್ಯನವರಿಗೆ ಶೋಭೆ ತರುವುದಿಲ್ಲ. ಹಣ ಮತ್ತು ಅಧಿಕಾರಕ್ಕಾಗಿ ನಾವು ಪಕ್ಷ ಬಿಟ್ಟಿದ್ದೇವೆ ಎಂದು ಹೇಳುವವರು ಅಧಿಕಾರ ಬಿಡಲು ಸಿದ್ಧವಾಗಿದ್ದರೆ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ರಾಜ್ಯ ರಾಜಕಾರಣದ ಈ ದಿಢೀರ್ ಬೆಳವಣಿಗೆ ಬಗ್ಗೆ ಹೇಳುವುದು ಸಾಕಷ್ಟಿದೆ. ಇಲ್ಲಿ ಯಾರು ಸತ್ಯ ಹರಿಶ್ಚಂದ್ರರು ಎಂದು ತಿಳಿಸುತ್ತೇವೆ. ಸುಪ್ರಿಂ ಕೋರ್ಟ್ ತೀರ್ಪಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ಹೇಳುತ್ತೇವೆ. ಸಾಕಷ್ಟು ಶಾಸಕರು ಏಕಾಏಕಿ ಪಕ್ಷ ತೊರೆಯುತ್ತಾರೆಂದರೆ ಯಾಕೆ? ಈಗ ಆ ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾವ ತಪ್ಪಿನಿಂದ ಇಷ್ಟು ದೊಡ್ಡ ಬೆಳವಣಿಗೆ ನಡೆಯಿತು ಎಂದು ಪ್ರಶ್ನೆ ಮಾಡಿದರು.
ಸಾವಿರಾರು ಕೋಟಿ ರೂಪಾಯಿ ಒಡೆಯರು ಕೂಡ ಸಚಿವ ಸ್ಥಾನ ತ್ಯಜಿಸಿದ್ದು ಏಕೆ? ಇಂಥ ಇನ್ನೂ ಹಲವು ವಿಚಾರಗಳಿವೆ. ಯಾರ್ಯಾರು ಅಧಿಕಾರ ತ್ಯಾಗ ಮಾಡುವುದಾಗಿ ಹೇಳಿ 30 ವರ್ಷಗಳಿಂದ ಹಾಗೆಯೇ ಮುಂದುವರಿಯುತ್ತಿದ್ದಾರೆ, ಅವರೆಲ್ಲರ ಬಗ್ಗೆಯೂ ತಿಳಿಸುತ್ತೇವೆ ಎಂದು ಕಾಂಗ್ರೆಸ್ನ ಹಿರಿಯ ನಾಯಕರ ಮೇಲೆ ಮಾಜಿ ಶಾಸಕ ಹೆಬ್ಬಾರ್ ಅಸಮಾಧಾನ ಹೊರಹಾಕಿದರು.
