ಅಭ್ಯರ್ಥಿ ಘೋಷಣೆಯಾಗಿಲ್ಲ ; ಗೊಂದಲ ಮುಗಿದಿಲ್ಲ ; ಚುನಾವಣೆ ಹೊಸ್ತಿಲಲ್ಲಿ ವದಂತಿಗಳ ಕಾರುಬಾರು ………

Featured, ಉಡುಪಿ

ಕುಂದಾಪುರ: ಚುನಾವಣೆ ಘೋಷಣೆಯಾಗಿದೆ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ರಾಜಕೀಯ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ ಆಕಾಂಕ್ಷಿಗಳ ಎದೆಯಲ್ಲಿ ಡವಡವ, ಚಡಪಡಿಕೆ ನಿಂತಿಲ್ಲ. ಬೆಂಬಲಿಗರ ನಿರೀಕ್ಷೆ ಕುಂದಿಲ್ಲ. ಅಸಲಿ ಅಭ್ಯರ್ಥಿಯಾರೆಂಬ ಗೊಂದಲ ಬಗೆಹರಿದಿಲ್ಲ.

ಬಿಜೆಪಿಯಲ್ಲಿ …..
ಬಿಜೆಪಿಯಲ್ಲಿ ಈ ಬಾರಿ ಹಾಲಾಡಿ ಶ್ರೀನಿವಾಸ ಶೆಟ್ಟರೇ ಸ್ಪರ್ಧಿಸುವುದು ಎಂಬುದು ಬಹುತೇಕ ಖಚಿತವಾಗಿದೆ. ಆದರೂ ಆಕಾಂಕ್ಷಿಗಳಲ್ಲಿ ಆಸೆಯ ಎಳೆ ಇದ್ದೇ ಇದೆ. ಜಯ ಪ್ರಕಾಶ್‌ ಹೆಗ್ಡೆ ಯವರಿಗೆ ಅವಕಾಶ ದೊರೆಯಬೇಕು ಎಂದು ಅವರ ಬೆಂಬಲಿಗರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಮನೆ ಮನೆ ಭೇಟಿ ಮಾಡುತ್ತಿದ್ದಾರೆ. ಮತ ಯಾಚನೆಯನ್ನೂ ನಡೆಸುತ್ತಿದ್ದಾರೆ. ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ಕುರಿತು ವದಂತಿಗಳೂ ಸೃಷ್ಟಿ ಯಾಗು ತ್ತಿವೆ. ಸಾಮಾಜಿಕ ಜಾಲತಾಣ ದಲ್ಲೂ ಜಯಪ್ರಕಾಶ್‌ ಹೆಗ್ಡೆಯವರಿಗೆ ಟಿಕೆಟ್‌ ಎಂಬಂತೆ ಅವರ ಬೆಂಬಲಿಗರು ಬಿಂಬಿಸುತ್ತಿದ್ದಾರೆ. 

ಈ ಮಧ್ಯೆ ಹಾಲಾಡಿಯವರ ಬೆಂಬಲಿಗರು ಕೂಡ ಇಂತಹ ಪ್ರಚಾರ ದಲ್ಲಿ ಹಿಂದೆ ಬಿದ್ದಿಲ್ಲ. ಹಾಲಾಡಿಯವರೇ ಅಭ್ಯರ್ಥಿ ಎಂದು ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿರುವ ಕಾರಣ ಹೆಚ್ಚು ಚಿಂತೆ ಮಾಡಿಲ್ಲ. ಪರಿವರ್ತನಾ ಯಾತ್ರೆ ಸಂದರ್ಭ ಯಡಿಯೂರಪ್ಪ ಅವರು ಹಾಲಾಡಿಯವರನ್ನು ಅಭ್ಯರ್ಥಿ ಎಂದಾಗ ಇದ್ದ ವಿರೋಧ, ಹಾಲಾಡಿ ಯವರು ಬಿಜೆಪಿ ವೇದಿಕೆ ಯಲ್ಲಿ ದ್ದಾಗ ಬಂದ ವಿರೋಧ ಈಗ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾದ ಬಳಿಕ ಇದ್ದಂತಿಲ್ಲ. ಆದರೂ ಒಳಗಿಂದೊಳಗೆ ಅವರದ್ದೇ ಪಕ್ಷೀಯರು ಜಯಪ್ರಕಾಶ ಹೆಗ್ಡೆಯವರು ಅಭ್ಯರ್ಥಿ ಯಾಗಬೇಕೆಂಬ ಒತ್ತಾಸೆ ಹೊಂದಿದ್ದಾರೆ. ಆದರೆ ಹಾಲಾಡಿಯವರು ಅಭ್ಯರ್ಥಿ ಯಾಗಬೇಕೆಂದು ಬಯಸುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದರೆ ವಿರೋ ಧಿಸುವವರ ಸಂಖ್ಯೆ ಸಣ್ಣ ಪ್ರಮಾಣದಲ್ಲಿದೆ. ಇದು ಚುನಾ ವಣೆಯ ಮೇಲೆ, ಅಭ್ಯರ್ಥಿ ಘೋಷಣೆ  ಯಾದ ಮೇಲೆ ಹೇಗೆ ಪ್ರಭಾವ ಬೀರು ತ್ತದೆ ಎನ್ನುವುದನ್ನು ಕಾದು ನೋಡಬೇಕು. 

ಬಿಜೆಪಿಯಿಂದ ಹೊರನಡೆದು ಪಕ್ಷೇತರರಾಗಿ ಅತಿಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಹಾಲಾಡಿಯವರು ಬಿಜೆಪಿಗೆ ಅನಿವಾರ್ಯ. 150 ಸ್ಥಾನ ಗಳು ಎಂದು ರಾಜ್ಯದ ಲೆಕ್ಕ ಹಾಕು ವವರು ಇಲ್ಲಿಯ ಪ್ರಬಲ ಅಭ್ಯರ್ಥಿ ಯನ್ನು ನಿರ್ಲಕ್ಷಿಸುವ ಕೆಲಸಕ್ಕೆ ಕೈ ಹಾಕಲಾರರು ಎನ್ನುವುದು ಸದ್ಯದ‌ ವಿಶ್ಲೇಷಣೆ. ಆಗ ಜಯಪ್ರಕಾಶ ಹೆಗ್ಡೆ ಯವರು ಬೈಂದೂರು ಕಡೆಗೆ ಗಮನ ಹರಿಸಬೇಕಾಗುತ್ತದೆ. ಒಟ್ಟಿನಲ್ಲಿ ಕುಂದಾ ಪುರ ಬಿಜೆಪಿಯಲ್ಲಿ ಒಂದಷ್ಟು ಹಾಲಾಡಿ ಅಸಮಾಧಾನಿಗಳು ಇದ್ದು, ಅವರನ್ನು ಸಮಾಧಾನಿಸುವ ಕೆಲಸ ಪಕ್ಷದಿಂದ ನಡೆಯಬೇಕಿದೆ. ಇವರಿಗೆ ಪಕ್ಷದ ಮೇಲೆ ಸಿಟ್ಟಿಲ್ಲ, ಹಾಲಾಡಿಯವರ ಮೇಲೆ ಮುನಿಸಿದೆ. ಆದ್ದರಿಂದ ಪಕ್ಷ ಇವರನ್ನು ಹೇಗೆ ಸಂತೈಸುತ್ತದೆ ಎನ್ನುವುದು ಕುತೂಹಲದ ಪ್ರಶ್ನೆ. 

ಬೈಂದೂರಿಗೆ ಯಾರು?
ಬೈಂದೂರು ಕಡೆ ಸ್ಪರ್ಧಿಸ‌ಲು ಮಾಜಿ ಸಚಿವ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆಯವರು ಸ್ವಂತ ಆಸಕ್ತಿ ಹೊಂದಿದ್ದಾರೆ. ಆದರೆ ಇಲ್ಲಿ ಬಿ.ಎಂ. ಸುಕುಮಾರ ಶೆಟ್ಟಿಯವರು ಪ್ರಬಲ ಆಕಾಂಕ್ಷಿ. ಕಳೆದ ಬಾರಿ ಸ್ಪರ್ಧಿಸಿ ಗೋಪಾಲ ಪೂಜಾರಿ ಅವರ ಎದುರು ಸೋತ ಬಳಿಕ ಸುಕುಮಾರ ಶೆಟ್ಟಿ ಯವರು ಕೈಕಟ್ಟಿ ಕೂರದೆ ಕ್ಷೇತ್ರಾ ದ್ಯಂತ ಮತದಾರರ ಸಂಪರ್ಕ ಇರಿಸಿ ಕೊಂಡಿ ದ್ದಾರೆ. ಯಡಿಯೂರಪ್ಪ ಅವರಿಗೆ ಆಪ್ತರು. ಕ್ಷೇತ್ರದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮಗಳಿಗೆ “ಶ್ರಮ’ ವಿನಿ ಯೋಗಿಸಿದ್ದಾರೆ ಎನ್ನುವುದು ಇವರಿ ಗಿರುವ ಪ್ಲಸ್‌ ಪಾಯಿಂಟ್‌. ಜಯಪ್ರಕಾಶ ಹೆಗ್ಡೆಯವರಿಗೆ ಎಲ್ಲಿಯೂ ಅಡ್ಡಿಯಾಗುವ ವ್ಯತಿರಿಕ್ತ ಅಂಶ ಗಳಿಲ್ಲ. ಆದರೆ ಆಕಾಂಕ್ಷಿಗಳ ಪಟ್ಟಿಯೇ ಅವರಿಗೆ ತೊಡರುಗಾಲು. ಎರಡೂ ಕಡೆ ಪ್ರಬಲ ಸ್ಪರ್ಧೆ ಪಕ್ಷ ದೊಳಗೆ ಇದೆ. ಇದರ ನಿವಾರಣೆ ಬಿಜೆಪಿಗೂ ಸವಾಲಾಗಿದೆ. ಅಭ್ಯರ್ಥಿ ಖಚಿತ ವಾಗದೆ ಕಾರ್ಯಕರ್ತರೂ ಗೊಂದಲ ದಲ್ಲಿದ್ದಾರೆ. ಆದರೆ ಪಕ್ಷ ತನ್ನ ಕಾರ್ಯಕರ್ತರಿಗೆ ಸ್ಪಷ್ಟ ಸೂಚನೆ ನೀಡಿದ್ದು, ಅಭ್ಯರ್ಥಿ ಕುರಿತು ತಲೆ ಕೆಡಿಸಿಕೊಳ್ಳಬೇಡಿ. ಕಮಲದ ಚಿಹ್ನೆಯೇ ನಮ್ಮ ಅಭ್ಯರ್ಥಿ, ಪ್ರಚಾರದ ಕೆಲಸ ಶುರು ಮಾಡಿ ಎಂದು ಸೂಚಿಸಿದೆ. 

ಕಾಂಗ್ರೆಸ್‌ನಲ್ಲಿ
ಬೈಂದೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುರಿತು ಗೊಂದಲ ಇಲ್ಲ. ಅಲ್ಲಿಂದ ಟಿಕೆಟ್‌ಗೆ ಹಾಲಿ ಶಾಸಕ ಗೋಪಾಲ ಪೂಜಾರಿ ಅವರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಅವರು ಆತ್ಮವಿಶ್ವಾಸದಿಂದಿದ್ದು, ಈಗಾಗಲೇ ಪ್ರಚಾರದ “ಸಿದ್ಧತೆ’ ನಡೆಸಿದ್ದಾರೆ. ಇಂಟಕ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ ಕಳೆದ ಕೆಲವು ತಿಂಗಳುಗಳಿಂದ ಊರು ಬಿಟ್ಟು ಕುಂದಾಪುರ ಕ್ಷೇತ್ರದಲ್ಲಿಯೇ ಬೀಡುಬಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಇಲ್ಲೇ ಮನೆ ಮಾಡಿದ್ದು, ತಾನು ಕುಂದಾ ಪುರ ನಿವಾಸಿ ಎಂದು ಹೇಳಿಕೊಂಡೇ ಎಲ್ಲದಕ್ಕೂ “ಧಾರಾಳಿ’ಯಾಗುತ್ತಿದ್ದಾರೆ. ಇಲ್ಲಿಯೂ ಅಂತಹ ಪ್ರಬಲ ಆಕಾಂಕ್ಷಿ ಗಳಿಲ್ಲ. ಕಳೆದ ಬಾರಿಯ ಅಭ್ಯರ್ಥಿ, ಪಕ್ಷದ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟರು ಕೂಡ ಮಲ್ಲಿಯೇ ನಮ್ಮ ಅಭ್ಯರ್ಥಿ ಎಂದಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಅಭ್ಯರ್ಥಿ ಚಿಂತೆ ಇಲ್ಲ; ಚುನಾ ವಣೆಯ ಚಿಂತೆ ಮಾತ್ರ. ಒಟ್ಟಿ ನಲ್ಲಿ ನಾಯಕರಿಗೆ ಟಿಕೆಟ್‌ ಚಿಂತೆ, ಕಾರ್ಯಕರ್ತರಿಗೆ ಯಾರು ಅಭ್ಯರ್ಥಿ ಎಂಬ ಚಿಂತೆ ಕರಾವಳಿಯ ಉತ್ತರ ಭಾಗದ ಈ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಮನೆ ಮಾಡಿದೆ.