ಅಲ್ಲಾಹು ಕೃಪೆಯಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ : ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಓವೈಸಿ
ಬಾಗಲಕೋಟೆ : ನಾನು ಮತ್ತೆ ಸಿಎಂ ಆಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪರ ವಿರೋಧ ವ್ಯಕ್ತಪಡಿಸುವವರ ಸಂಖ್ಯೆ ಏರುತ್ತಿದ್ದು ಈಗ ಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಈ ಹೇಳಿಕೆ ವಿರೋಧಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿ ಪರ ನಿಂತಿದ್ದಾರೆ.
ಗೌರವ, ಅಧಿಕಾರ ಕೊಡುವುದು ಭಗವಂತ ಕೈಯಲ್ಲಿದೆ. ಈ ಹಿಂದೆ ಕುಮಾರಸ್ವಾಮಿ ಕಿಂಗ್ ಆಗುತ್ತಾರೆ ಎಂದು ಹೇಳಿದ್ದೆ. ಆಗ ಅಧಿಕಾರದಲ್ಲಿದ್ದವರು ಬೀದಿಗೆ ಬಂದಿದ್ದಾರೆ ಎಂದು ಇಳಕಲ್ ನಗರದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕುಮಾರಸ್ವಾಮಿ ಅಲ್ಲಾನ ಕೃಪೆಯಿಂದ ಕಿಂಗ್ ಆಗಿದ್ದಾರೆ. ಕುಮಾರಸ್ವಾಮಿಯವರ ಮೇಲೆ ನನಗೆ ಭರವಸೆ ಇದೆ. ನಾವು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇ ತಪ್ಪು ಎಂದು ಕೆಲವರು ಹೇಳಿದರು. ತಪ್ಪೇನು? ಅದೇನು ಇವರಪ್ಪನ ಆಸ್ತಿನಾ? ನಮಗೆ ಬಿಜೆಪಿ ತಡೆಯುವುದೇ ಉದ್ದೇಶ ಎಂದು ಹೇಳಿದರು.
ನಾವೇನೂ ಗುಲಾಮರಲ್ಲ :
ಜಾತ್ಯತೀತ ಸರ್ಟಿಫಿಕೇಟ್ ಬೇಕೆಂದರೆ ನಮ್ಮ ಕಡೆ ಬನ್ನಿ ಎಂದು ಕಾಂಗ್ರೆಸ್ ಹೇಳುತ್ತದೆ. ರಾಷ್ಟ್ರೀಯತೆ ಸರ್ಟಿಫಿಕೇಟ್ ಬೇಕು ಎಂದರೆ ನಮ್ಮೊಂದಿಗೆ ಬನ್ನಿ ಎಂದು ಬಿಜೆಪಿ ಕರೆಯುತ್ತದೆ. ನಾವೇನು ನಿಮ್ಮ ಗುಲಾಮರಲ್ಲ. ಇವೆರಡೂ ಪಕ್ಷಗಳು ಲಾಲಾಗಳು ಇದ್ದ ಹಾಗೆ. ಅವರ ಅಂಗಡಿ ಬಂದ್ ಮಾಡುವ ಸಮಯ ಬಂದಿದೆ ಎಂದು ವ್ಯಂಗ್ಯವಾಡಿದರು.
