ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ – vishwanews24
ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ
ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದಿಂದ ರಸಗೊಬ್ಬರ ಕಚ್ಚಾವಸ್ತುಗಳ ಕೊರತೆಯ ಆತಂಕ ಎದುರಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಯೂರಿಯಾದಂತಹ ರಸಗೊಬ್ಬರಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಲು ಮತ್ತು ವೈಜ್ಞಾನಿಕ ಬಳಕೆಯನ್ನು ಉತ್ತೇಜಿಸಲು ರೈತರಿಗೆ ಫಾರ್ಮರ್ಸ್ ಐಡಿ ಹೊಂದುವುದನ್ನು ಕಡ್ಡಾಯಗೊಳಿಸಿದೆ.
ಈ ವರ್ಷದಿಂದ ಯೂರಿಯಾ, ಡಿಎಪಿ ಸೇರಿದಂತೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ ಎಫ್ಐಡಿ ಕಡ್ಡಾಯ. ಪ್ರತಿಯೊಬ್ಬ ರೈತರೂ ಎಫ್ಐಡಿಯನ್ನು ಮಾಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆ 20 ದಿನಗಳ ಹಿಂದೆ ಸುತ್ತೋಲೆ ಹೊರಡಿಸಿದೆ.
ಏನು ಕೊರತೆ?
ಗೊಬ್ಬರ ತಯಾರಿಕೆಗೆ ಪ್ರಮುಖವಾಗಿ ನೈಸರ್ಗಿಕ ಅನಿಲ ಬೇಕಾಗುತ್ತದೆ. ಇದರೊಂದಿಗೆ ಇನ್ನುಳಿದ ಕಚ್ಚಾವಸ್ತುಗಳು ಬರುವುದು ಕತಾರ್, ಸೌದಿ ಅರೇಬಿಯಾ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳಿಂದ. ಅದರಲ್ಲೂ ಬಹುಪಾಲು ಕಚ್ಚಾ ವಸ್ತು ಹೋರ್ಮುಜ್ ಜಲಸಂಧಿ ಮಾರ್ಗದ ಮೂಲಕವೇ ಬರುತ್ತದೆ. ಸದ್ಯ ಹೋರ್ಮುಜ್ ಜಲಸಂಧಿ ಬಹುತೇಕ ಬಂದಾಗಿದ್ದು, ಕಚ್ಚಾ ವಸ್ತುಗಳು ಬರುತ್ತಿಲ್ಲ. ಸದ್ಯಕ್ಕೆ ಬೇಕಾಗುವಷ್ಟು ಕಚ್ಚಾ ವಸ್ತುಗಳ ದಾಸ್ತಾನಿದೆ ಎಂದು ಮೂಲಗಳು ತಿಳಿಸಿವೆ. ಆದರೂ ಸಹ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ರಸಗೊಬ್ಬರ ಖರೀದಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಎಫ್ಐಡಿ ಕಡ್ಡಾಯಗೊಳಿಸಿ ಕೃಷಿ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಿದೆ.
