ಉಗ್ರರ ದಾಳಿ ಖಂಡಿಸಿ ಫೆ. 19 ರಂದು ‘ಕರ್ನಾಟಕ ಬಂದ್’ ಗೆ ಕರೆ .. -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ಪುಲ್ವಾಮ ಉಗ್ರರ ದಾಳಿ ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಫೆ. 19 ರಂದು ಕರ್ನಾಟಕ ಬಂದ್ ಮಾಡುವುದಾಗಿ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ಯೋಧರ ಸಾವಿನಿಂದ ಭಾರತವೇ ಕಣ್ಣೀರುಡುತ್ತಿದೆ. ಭಾರತ ಸರ್ಕಾರಕ್ಕೆ ಇದೊಂದು ಚಾಲೆಂಜ್ ಆಗಿದೆ. ನಾವು ಮನಸು ಮಾಡಿದರೆ ಉಗ್ರ ಸಂಘಟನೆಯನ್ನು ಪುಡಿ ಮಾಡುವ ಶಕ್ತಿ ಇದೆ. 49 ಯೋಧರ ಪ್ರಾಣ ಕಳೆದುಕೊಂಡಿದ್ದಾರೆ. ಇಂಟೆಲಿಜೆನ್ಸ್ ಏನಾಗಿದೆ. ವಾಹನ ಬಂದು ಡಿಕ್ಕಿ ಹೊಡೆದರೂ ಯಾಕೆ ನೋಡ್ಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಆರು ಕೋಟಿ ಕನ್ನಡಿಗರು ಉಗ್ರರ ವಿರುದ್ದ ಪ್ರತೀಕಾರಕ್ಕಾಗಿ ಕಾಯುತ್ತಾ ಇದ್ದಾರೆ. ಪಕ್ಷ ಭೇದ ಮರೆತು ಎಲ್ಲಾ ಪಕ್ಷಗಳು ಒಂದಾಗಿವೆ. ಈ ಕೃತ್ಯ ಖಂಡಿಸಿ ಭಯೋತ್ಪಾದನೆ ಇರಬಾರದು ಎಂದು ಬಂದ್ ಗೆ ಕರೆ ನೀಡಲಾಗಿದೆ ಎಂದು ಹೇಳಿದರು.

ಅಂದು ಬೆಳಗ್ಗೆ 6ರಿಂದ ಸಂಜೆಯವರೆಗೂ ಬಂದ್ ನಡೆಯಲಿದೆ. ಆಸ್ಪತ್ರೆ, ಮಾಧ್ಯಮಗಳು, ಔಷಧಿ, ಹಾಲು ಮಾರಾಟಕ್ಕೆ ವಿನಾಯಿತಿ ಇರುತ್ತದೆ. ಬಸ್‌ಗಳು, ಸಿನಿಮಾ, ಖಾಸಗಿ ವಾಹನಗಳು ಬಂದ್ ಆಗಲಿವೆ. ಹೋಟೆಲ್‌, ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಶಾಲಾ ಕಾಲೇಜ್ ಬಂದ್ ಆಗಲಿವೆ ಎಂದು ಹೇಳಿದರು.

ಬಿಡಿಎ, ಬಿಬಿಎಂಪಿ ಎಲ್ಲಾ ಕಾರ್ಖಾನೆಗಳು, ಐಟಿ-ಬಿಟಿ ಬಂದ್ ಆಗಬೇಕು. ಆದರೆ, ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಅಂದು ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ವಾಟಾಳ್‌ ಮನವಿ ಮಾಡಿದರು.

ಕೈಗಾರಿಕಾ ಸಂಘಟನೆಗಳು, ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಸಂಘ, ಸರ್ಕಾರಿ ನೌಕರರ ಸಂಘ, ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಸಂಘ ಸೇರಿದಂತೆ ಹಲವು ಸಂಘಟನೆಗಳಿಂದ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.