ಉಡುಪಿ : ಅಂದು ತುಳಿದವರ ಮುಂದೆ ಇಂದು ಎದುರಾಳಿ ಕೋಟ….??vishwanews24

Featured, ಉಡುಪಿ, ವಿಶೇಷ ಲೇಖನಗಳು

ಉಡುಪಿ : ಅಂದು ತುಳಿದವರ ಮುಂದೆ ಇಂದು ಎದುರಾಳಿ ಕೋಟ….??

ಕೋಟಾ ಶ್ರೀನಿವಾಸ ವೃತ್ತಿಯಲ್ಲಿ ಛಾಯಾಗ್ರಾಹಕ, ಪಂಚಾಯತ್ ವ್ಯವಸ್ಥೆಯಿಂದ ಬೆಳೆದು ವಿಧಾನ ಸೌಧದ ಮೆಟ್ಟಿಲು ಏರಿದ ವ್ಯಕ್ತಿ .ಮುಂದೆ ಗೆದ್ದರೆ, ದಿಲ್ಲಿಯ ಪಾರ್ಲಿಮೆಂಟ್ ಪ್ರವೇಶ ಮಾಡಬಹುದಾದ ಶ್ರೀನಿವಾಸ ಪೂಜಾರಿ.

ಅವಲಕ್ಕಿ- ನೀರು ಮನೆಯಲ್ಲಿ ಕಟ್ಟಿಕೊಂಡು ಭಾಜಪದ ಪರ ಕೆಲಸ ಮಾಡುತ್ತಿದ್ದ ಕಾಲದಿಂದ ಇವತ್ತಿನವರೆಗೂ, ವೇಷಭೂಷಣ ವ್ಯಕ್ತಿತ್ವ ಬದಲಾಗದಿರುವ ಮೇರು ಸ್ವಭಾವದ ನಾಯಕ. ಎದುರಿನಿಂದ ಅಲ್ಲದಿದ್ದರೂ ಹಿಂದಿನಿಂದ ಯಾರನ್ನು ಗುದ್ದಿ‌ ಮಣ್ಣು‌ಮುಕ್ಕಿಸಬಹುದೆಂದು ತೀಕ್ಷ್ಣ ಆಲೋಚನೆ ಇರುವ ಕೋಟಾರಿಗೆ ಈ ಬಾರಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ.

ಯಡಿಯೂರಪ್ಪ ಗ್ಯಾಂಗ್ ನ ತೀರ ಹತ್ತಿರದವರಾದರೂ ಕಲ್ಲಡ್ಕ ಪ್ರಭಾಕರ ಭಟ್ ರಂತಹ ಗರಡಿಯಲ್ಲಿ ಬೆಳೆದ ಸೈನಿಕ. ಯಾವುದೇ ಸಮಯದಲ್ಲಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವಷ್ಟು ಪಾದರಸದಂತಿರುವವರು. ಮುಜರಾಯಿ ಸಚಿವರಾಗಿದ್ದ ಸಮಯದಲ್ಲಿ ದೇವಸ್ಥಾನ- ದೈವಸ್ಥಾನದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದವರಿಗೆ ಮೋದಿ ಟಿಕೆಟ್ ಘೋಷಣೆ ಮಾಡಿದ್ದಾರೆ.

ಸರಿ. ಮುಂದೆ ಓದುವುದಾದರೆ , ಒಂದು ಕಾಲದಲ್ಲಿ ಕಾರ್ಯಕರ್ತರ ನಿಕಟ ಸಂಪರ್ಕವಿದ್ದರೂ ಕಡೆಕಡೆಗೆ ಎಂ.ಎಲ್ ಸಿ ಆಗಿ ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರ ಬಗ್ಗೆ ಅಷ್ಟೊಂದು ಒಲವಿಲ್ಲದ ರೀತಿಯ ವರ್ತನೆಯಿಂದ ಇರುಸು ಮುರುಸಾಗಿದ್ದರೂ, ಕೂಡ ತನ್ನ ಮಾತಿನ ಶೈಲಿಯಲ್ಲಿ ಬಂಡೆಕಲ್ಲಿನ‌ ಮನಸ್ಸನ್ನು ಕೂಡ ಕರಗಿಸಿ ಬಿಡಬಲ್ಲ ಶಕ್ತಿಯೇ ಇವರ ಮೂಲ ಬಂಡವಾಳವೇ ಸರಿ.

ಇನ್ನೂ ಜಾತಿಯ ವಿಚಾರಕ್ಕೆ ಬಂದರೆ, ಹತ್ತು ಪೈಸೆಯ ಜಾತಿಯ ವ್ಯಾಮೋಹ ಇಲ್ಲ. ತೋರ್ಪಡಿಕೆಯ ದೃಷ್ಟಿಯಿಂದ ಪೂಜಾರಿ ಎನ್ನಬಹುದೇ ಹೊರತು ಜಾತಿ ಮೀರಿದ ವ್ಯಾಪ್ತಿಯಲ್ಲಿ ಕೋಟಾ ಮೀಸಲಾತಿ ಹೊಂದಿರುವ ಪರಿಣಾಮವಾಗಿ ಧರ್ಮದ ಭಾಷಣ ಮಾತ್ರ ಸೂಪರ್….

ಭರವಸೆಯ ರಾಶಿಯನ್ನು ಹೊತ್ತು ತಿರುಗಾಡುವ ಇವರಿಗೆ ಈಡೇರಿಸಲು ಸಮಯ ಸಂದರ್ಭ ಕೂಡಿ ಬರುವ ಕಾಲ ಮಾತ್ರ ವಿರಳ. ಸಿಂಪಲ್ ಸ್ಟಾರ್ ಎಂಬ ಹಣೆಪಟ್ಟಿಯ ಮುಂದೆ ಎಲ್ಲವೂ ಗೌಣವಾಗಿರುವ ಪರಿಣಾಮವಾಗಿ ,ಕೋಟಾ ಅವರನ್ನು ವಿರೋಧಿಸುವವರ ಸಂಖ್ಯೆ ತೀರ ವಿರಳವಾಗಿದೆ.

ಯಾವುದೇ ವಿಚಾರವನ್ನು ತನ್ನ ಮೂಗಿನ ನೇರದಲ್ಲಿ ಚರ್ಚಿಸಿ ಗೆಲ್ಲುವಷ್ಟು ತಾಕತ್ತಿರುವ ಪರಿಣಾಮವಾಗಿ ಮತ್ತು ಯಾರ‌‌ ಮುಂದೆಯೂ ಅವರವರ ಅನುಕೂಲಕ್ಕೆ ತಕ್ಕಂತೆ ಮಂಡಿಯೂರಿ ಕೆಲಸ ಮಾಡಿಸಿಕೊಳ್ಳುವಲ್ಲಿ ಕೋಟಾ ಎತ್ತಿದ ಕೈ , ಹಾಗಾಗಿ ಇವರು ಅಜಾತಶತ್ರು.

ಮುಂದಿನ‌ ಸರದಿ ಪ್ರಕಾರ ದಿಲ್ಲಿಯ ಪಯಣ ಸುಲಭವಾಗಿ ಗೆಲ್ಲಬಹುದೆಂಬ ನಿರೀಕ್ಷೆ ಇದೆ. ಆದರೆ ರಾಜಕೀಯ ಹಾಗಲ್ಲ. ಕಾರ್ಯಕರ್ತರ ಮನಮುಟ್ಟದೆ ಸುಮಾರು ವರುಷಗಳೇ ಕಳೆದುಹೋಗಿದೆ ಆ ಪರಿಣಾಮವಾಗಿ , ಮೊದಲ ಸುತ್ತು ಕಾರ್ಯಕರ್ತರ ಮನವೊಲಿಸಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಎದುರಾಗಬಹುದು ಹಾಗೂ ಅದರ ನಂತರ ಗೆಲ್ಲಬಹುದು.

ಒಂದು ವೇಳೆ ಜೆ.ಪಿ ಹೆಗ್ಡೆ ಈ ಬಾರಿ ಇವರಿಗೆ ಎದುರಾಳಿಯಾದರೆ ಚುನಾವಣೆಯ ಮಜಾ ಇದೆ .ಕಾರಣ, ಜೆ‌ಪಿಯನ್ನು ಬಿಜೆಪಿ ತರುವಲ್ಲಿ ಇವರ ಪಾತ್ರವೂ ಮಹತ್ವದ್ದಾಗಿತ್ತು. ಜತೆಗೆ ಒಂದು ಕಾಲದಲ್ಲಿ ಅಂದರೆ ಸುಮಾರು ಹದಿನೈದು ವರ್ಷದ ಹಿಂದೆ ಕಾಂಗ್ರೆಸ್ ಉಡುಪಿ ಭಾಗದಲ್ಲಿ ತಾಂಡವವಾಡುತ್ತಿರುವಾಗ ಇದೇ ಜೆ.ಪಿ ,ಕೋಟಾರಿಗೆ ಮಾಡಿದ ಅನ್ಯಾಯ ಒಂದಿಷ್ಟಲ್ಲ. ಲೈಫ್ ಯಾವಾಗಲೂ ಹೀಗೆಯೇ ಸೈಕಲ್ ಪೆಡಲ್ ತರಹ. ಕೆಳಗಿದ್ದವರು ಮೇಲೆ ಮೇಲಿದ್ದವರೂ ಕೆಳಗೆ ಬರಬೇಕು. ರಕ್ತಸಿಕ್ತ ರಾಜಕೀಯ ಜೆಪಿಯ ಆಡಳಿತದ ಅವಧಿಯಲ್ಲಿತ್ತು. ಪೊಲೀಸ್ ವ್ಯವಸ್ಥೆ ಕೂಡ , ಅವರ ಕೈಕೆಳಗಿನ ಕೂಸಾಗಿತ್ತು. ಹಾಗಾಗಿ ಕೋಟಾ ಪಡದ ಕಷ್ಟ ಅಷ್ಟಿಷ್ಟಲ್ಲ. ಭಾಜಪ ಬಾವುಟವನ್ನು ಅಂಗಿಯೊಳಗೆ ಸಿಕ್ಕಿಸಿಕೊಂಡು ಹೋಗುವ ಪರಿಸ್ಥಿತಿಯಲ್ಲಿ ಪಾರ್ಟಿ ಕಟ್ಟಿದವರು ಪೂಜಾರಿ ಗ್ಯಾಂಗ್. ಕಾಂಗ್ರೆಸ್ ಎಂಬ ರಣಹದ್ದು ಅವತ್ತಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕುಕ್ಕಿ ಕುಕ್ಕಿ ತಿನ್ನುತ್ತಿತ್ತು. ಆ ಸಮಯದಲ್ಲಿ ಕಣ್ತಪ್ಪಿಸಿ ಬಿಜೆಪಿ ಬಾವುಟ ಏರಿಸಿದವರ ಪೈಕಿ ಕೋಟಾರವರ ಚಾಣಕ್ಷತೆ ಇವತ್ತು ಪಾರ್ಲಿಮೆಂಟ್ ಚುನಾವಣೆಯ ಟಿಕೆಟ್ ಗಿಟ್ಟಿಸಿಕೊಳ್ಳುವವರೆಗೆ ಬಂದು ನಿಂತಿದೆ.

ದೊಡ್ಡ ಮೊತ್ತದ ದುಡ್ಡು ಖರ್ಚು ಮಾಡದೇ ಚುನಾವಣೆ ಎದುರಿಸಿದವರ ಪೈಕಿಯಲ್ಲಿ, ಶ್ರೀನಿವಾಸ ಪೂಜಾರಿಗೆ ಈ ಚುನಾವಣೆ ಹೇಗಾಗುತ್ತೋ ಗೊತ್ತಿಲ್ಲ. ಆದರೆ ಗೆಲುವು ಮಾತ್ರ ಅವರ ಸಮೀಪದಲ್ಲಿ ತಿರುಗುತ್ತಿದೆ ಹಣೆಬರಹದ ಮೇಲೆ ನಿಂತಿದೆ ಅಷ್ಟೇ…!!

ಸರಳ ಸಜ್ಜನ ಬ್ರ್ಯಾಂಡ್ ನ ಕೋಟಾ ಬೆಂಬಲಕ್ಕೆ ಸದ್ಯ ಸಾವಿರಾರು ಕೈಗಳಿವೆ. ಅದೂ ಕೂಡ ಕಾಂಗ್ರೆಸ್ ಗೆ ಟಿಕೆಟ್ ಘೋಷಣೆಯ ನಂತರ ಚಿತ್ರಣ ಬದಲಾಗುವುದು ಶತಸಿದ್ದ . ಜಾತಿ ಲೆಕ್ಕಾಚಾರ ನಡೆಯದೆ ಇದ್ದರೆ , ಕೋಟಾ ಪಾಸ್ . ಮೋದಿಯನ್ನೇ ನೋಡಿ ಮತ ಹಾಕಿದರಂತೂ, ಮೋರ್ ದೆನ್ ಎಪ್ಪತ್ತು ಸಾವಿರ ಲೀಡ್ ಬರುತ್ತೆ.

ಏನೇ ಆಗಲಿ ಅಂದು ತುಳಿದವರ ಮುಂದೆ ಇಂದು ಎದುರಾಳಿಯಾಗುವುದೆಂದರೆ ಸುಲಭದ ಮಾತಲ್ಲ . ಅದಕ್ಕೆ ಹಣೆಬರಹ ಚೆನ್ನಾಗಿರಬೇಕು ಜೊತೆಗೆ ತಾಕತ್ತಿರಬೇಕು. ಅದೂ ಎರಡೂ ಕೋಟಾರ ಜೊತೆಗಿದೆ. ಮುಂದೆನೆಂದೂ ಕಾದು ನೋಡಬೇಕಿದೆ ಅಷ್ಟೇ..!!

ಬರಹ : ಸಾಲಿಯಾನ್ ಮೂಳೂರು….

Leave a Reply