ಉಡುಪಿ : ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಆಗಮಿಸಿದ ಎಂಜಿಎಂ ವಿದ್ಯಾರ್ಥಿಗಳು – Vishwanews24
ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಆಗಮಿಸಿದ ಎಂಜಿಎಂ ವಿದ್ಯಾರ್ಥಿಗಳು – Vishwanews24
ಉಡುಪಿ: ರಾಜ್ಯದಲ್ಲಿ ಹಿಜಬ್- ಕೇಸರಿ ಫೈಟ್ ಜೋರಾಗಿದ್ದು, ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಈ ಮಧ್ಯೆ ವಿದ್ಯಾರ್ಥಿಗಳು ಮಾತ್ರ ತಮ್ಮ ಹೋರಾಟ ಮುಂದುವರಿಸುತ್ತಲೇ ಇದ್ದಾರೆ. ಇಂದು ನಗರದ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲಿನೊಂದಿಗೆ ಕಾಲೇಜಿಗೆ ಆಗಮಿಸಿದ್ದಾರೆ.
ಬುರ್ಖಾ, ಹಿಜಬ್ ಧರಿಸಿ ವಿದ್ಯಾರ್ಥಿನಿಯರು ಬಂದರೆ, ಕೇಸರಿ ಪೇಟ, ಕೇಸರಿ ಶಾಲು ತೊಟ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದಾರೆ.
ರಾಜ್ಯಾದ್ಯಂತ ಹಿಜಬ್ ಧರಿಸುವ ಹಕ್ಕಿಗಾಗಿ ಹೋರಾಟ ನಡೆಯುತ್ತಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಧಾರ್ಮಿಕ ಹಕ್ಕು ಎರಡು ಧರ್ಮಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು ಇಂದು ಪ್ರಕರಣದ ವಿಚಾರಣೆ ಆರಂಭವಾಗಲಿದೆ.
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಬ್ಗೆ ನಿರ್ಬಂಧ ಹೇರಿದ್ದನ್ನ ವಿರೋಧಿಸಿ, ಕೆಲ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇವತ್ತು ಹೈಕೋರ್ಟ್ ಕಟಕಟೆಗೆ ಈ ಪ್ರಕರಣ ಬರಲಿದೆ. ಸುಪ್ರೀಂಕೋರ್ಟ್, ಕೇರಳ, ಮದ್ರಾಸ್ ಹೈಕೋರ್ಟ್ಗಳು ಇಂಥದ್ದೇ ಪ್ರಕರಣಗಳಲ್ಲಿ ವಸ್ತ್ರ ಸಂಹಿತೆಯನ್ನ ಎತ್ತಿ ಹಿಡಿದಿವೆ. ಹೀಗಾಗಿ ಉಡುಪಿ ಪ್ರಕರಣದಲ್ಲಿ ಹೈಕೋರ್ಟ್ ಯಾವ ಆದೇಶ ನೀಡಲಿದೆ ಅನ್ನೋದು ಎಲ್ಲರ ಕುತೂಹಲ ಕೆರಳಿಸಿದೆ.
