ಉಡುಪಿ : ಜಿಲ್ಲೆಯಲ್ಲಿ ಕೊರೋನಾ ವೈರಸ್ ವರದಿಯಾಗಿಲ್ಲ , ಇದರ ಬಗ್ಗೆ ಸುಳ್ಳು ಮಾಹಿತಿ ರವಾನೆ ಮಾಡಿದರೆ ಕಠಿಣ ಕ್ರಮ -Vishwanews24

Featured, ಉಡುಪಿ

ಉಡುಪಿ : ಜಿಲ್ಲೆಯಲ್ಲಿ ಕೊರೋನಾ ವೈರಸ್ ವರದಿಯಾಗಿಲ್ಲ , ಇದರ ಬಗ್ಗೆ ಸುಳ್ಳು  ಮಾಹಿತಿ ರವಾನೆ ಮಾಡಿದರೆ ಕಠಿಣ ಕ್ರಮ -Vishwanews24

ಉಡುಪಿ: ಕಾರ್ಕಳದ ಮುನಿಯಾಲು ಗ್ರಾಮದ 75 ವರ್ಷ ವಯಸ್ಸಿನ ಹಿರಿಯ ವೃದ್ದರೊಬ್ಬರು ಮತ್ತವರ ಪತ್ನಿ ಇತ್ತೀಚೆಗೆ ಹತ್ತುದಿನಗಳ ಕಾಲ ಇಸ್ರೇಲ್ ಪ್ರವಾಸ ಮಾಡಿ ಬಂದಿದ್ದರು. ಶೀತ ಭಾದೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ರಾತ್ರಿ ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡುವಿನಲ್ಲಿ ದಾಖಲು ಮಾಡಲಾಗಿದೆ. ಅಲ್ಲದೆ ವಯೋಸಹಜವಾಗಿ ರಕ್ತದೊತ್ತಡ, ಮಧುಮೇಹ, ಕಾಯಿಲೆಯಿಂದ ಕೂಡ ಬಳಲುತ್ತಿದ್ದರು. ಉಸಿರಾಟದ ತೊಂದರೆಯೂ ಕೂಡ ಕಂಡು ಬಂದಿದೆ. ಅವರನ್ನು ಇದೀಗ ಪ್ರತ್ಯೇಕ ವಾರ್ಡ್‍ನಲ್ಲಿ ಗಮನಿಸಲು ಇಡಲಾಗಿದೆ. ಆರೋಗ್ಯ ಚೆನ್ನಾಗಿದೆ ಯಾವುದೇ ಏರುಪೇರು ಕಂಡು ಬಂದಿಲ್ಲ. ಅಲ್ಲದೆ ಅವರ ಪತ್ನಿಗೂ ಯಾವುದೆ ತೊಂದರೆ ಕಾಣಿಸಿಕೊಂಡಿಲ್ಲ.

ಆ ವೃದ್ದ ದಂಪತಿಗಳು ಹತ್ತು ದಿನಗಳ ಕಾಲ ಇಸ್ರೇಲ್ ಪ್ರವಾಸ ಮಾಡಿ ಬಂದಿದ್ದರು. ಆದರೆ ಮೇಲ್ನೋಟಕ್ಕೆ ಯಾವುದೇ ಸೋಕು ತಗುಲಿರುವಂತೆ ಕಾಣುತ್ತಿಲ್ಲ. ಇಂದು ಬೆಳಗ್ಗೆಯಷ್ಟೇ ಅವರ ರಕ್ತದ ಸ್ಯಾಂಪಲ್ ಮತ್ತು ರಕ್ತಸ್ರಾವದ ಮಾದರಿಯನ್ನು ಬೆಂಗಳೂರಿನ ಲ್ಯಾಬ್‍ಗೆ ಕಳುಹಿಸಲಾಗಿದ್ದು ನಾಳೆ ಅದರ ವರದಿ ಬರಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.

ಇದೇ ವಿಚಾರವಾಗಿ ಕಾರ್ಕಳದ ಇಬ್ಬರಿಗೆ ಕೊರೋನಾ ಸೋಂಕು ಎಂಬ ಸುಳ್ಳು ಮಾಹಿತಿ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಅಥವಾ ಭಯ ಹುಟ್ಟಿಸುವ ಸಂದೇಶಗಳನ್ನು ರವಾನೆ ಮಾಡಿದ್ದಲ್ಲಿ ಅವರ ಮೇಲೆ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂಧ್ರ ಸೂಡ ಅವರು  ತಿಳಿಸಿದ್ದಾರೆ.