ಉಡುಪಿ : ಪರ್ಕಳದಲ್ಲಿ ಮತ್ತೆ ಬೀಡಾಡಿ ಗೋವುಗಳಿಗೆ ಚರ್ಮ ಗಂಟು ರೋಗದ ಭೀತಿ; ಮುನ್ನೆಚ್ಚರಿಕೆ ಕ್ರಮಕ್ಕೆ ಒತ್ತಾಯ -vishwanews24
ಉಡುಪಿ : ಪರ್ಕಳದಲ್ಲಿ ಮತ್ತೆ ಬೀಡಾಡಿ ಗೋವುಗಳಿಗೆ ಚರ್ಮ ಗಂಟು ರೋಗದ ಭೀತಿ; ಮುನ್ನೆಚ್ಚರಿಕೆ ಕ್ರಮಕ್ಕೆ ಒತ್ತಾಯ
ಉಡುಪಿ: ಪರ್ಕಳದಲ್ಲಿ ಮತ್ತೆ ಬೀಡಾಡಿ ಗೋವುಗಳಲ್ಲಿ ಚರ್ಮ ಗಂಟು ರೋಗ (Lumpy Skin Disease) ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪರ್ಕಳದ ನಿವಾಸಿ ಕೆ.ಆರ್. ಅಶೋಕ್ ಅವರು ತಮ್ಮ ನಿವಾಸದ ಬಳಿ ಪ್ರತಿದಿನ ಬೀಡಾಡಿ ಗೋವುಗಳಿಗೆ ಉಚಿತವಾಗಿ ಆಹಾರ ನೀಡುತ್ತಿದ್ದಾರೆ.
ನಿತ್ಯ ಬರುವ ಗೋವುಗಳ ಪೈಕಿ ಒಂದಕ್ಕೆ ಚರ್ಮ ಗಂಟು ರೋಗದ ಲಕ್ಷಣಗಳು ಕಂಡುಬಂದಿದ್ದು, ದೇಹದ ಮೇಲಿನ ಗಾಯಗಳು ಉಲ್ಬಣಗೊಂಡಿರುವುದು ಗಮನಕ್ಕೆ ಬಂದಿದೆ.
ಗೋವಿನ ಸ್ಥಿತಿ ಕಂಡು ಕೆ.ಆರ್. ಅಶೋಕ್ ಅವರು ಸ್ವತಃ ಆರೈಕೆ ಮಾಡುತ್ತಿದ್ದು, ಗಾಯಗಳಿಗೆ ಅರಿಶಿನ ಹಚ್ಚಿ ಚಿಕಿತ್ಸೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.
ಆದರೆ ಸಂಬಂಧಪಟ್ಟ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಔಷಧೋಪಚಾರ ಹಾಗೂ ಚಿಕಿತ್ಸೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೆಬೆಟ್ಟು ಮಾತನಾಡಿ, ಸೋಂಕು ಇತರ ಗೋವುಗಳಿಗೆ ಹರಡದಂತೆ ಜಿಲ್ಲಾಡಳಿತ ಮತ್ತು ಪಶು ಸಂಗೋಪನಾ ಇಲಾಖೆ ತಕ್ಷಣ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
