ಉಡುಪಿ: ಮನೆಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ – vishwanews24

Featured, ಉಡುಪಿ

ಉಡುಪಿ: ಮನೆಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ವಿದೇಶಿ ಕರೆನ್ಸಿ ಸಹಿತ 23.56 ಲಕ್ಷ ರೂ.ಮೌಲ್ಯದ ಸೊತ್ತು ವಶ

ಉಡುಪಿ: ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿರುವ ಉಡುಪಿ ನಗರ ಠಾಣೆ ಪೊಲೀಸರು, ಚಿನ್ನಾಭರಣ, ಬೆಳ್ಳಿ, ವಿದೇಶಿ ಕರೆನ್ಸಿ, ನಗದು, ವಾಹನಗಳು ಸೇರಿದಂತೆ ಒಟ್ಟು 23.56 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಗಳನ್ನು ಅರುಣ್ ಆಚಾರಿ ಎಸ್.ವಿ.(43) ಹಾಗೂ ಕೌಶಿಕ್ (19) ಎಂದು ಗುರುತಿಸಲಾಗಿದೆ.

ಪುತ್ತೂರು ಗ್ರಾಮದ ಭಗವತಿ ಲೇಔಟ್‌ನ ಮಹಿಳೆಯೊಬ್ಬರು ಪತಿ ಹಾಗೂ ಮಗುವಿನೊಂದಿಗೆ ದುಬೈನಲ್ಲಿ ವಾಸವಿದ್ದು, ಊರಿಗೆ ಬಂದಿದ್ದರು. ಗಂಡ ವಿದೇಶಕ್ಕೆ ತೆರಳಿದ ಬಳಿಕ ಆ.8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆ.11ರಂದು ಬೆಳಗ್ಗೆ 11.30ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಟೆರೇಸ್ ಬಾಗಿಲನ್ನು ಆಯುಧದಿಂದ ಬಲವಂತವಾಗಿ ತೆರೆದು, ಕಪಾಟಿನ ಡ್ರಾವರ್‌ನಲ್ಲಿದ್ದ 10 ಸಾವಿರ ಎಇಡಿ (AED) ಹಾಗೂ 14 ಸಾವಿರ ರೂ. ನಗದು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:

ನಿಮ್ಮ ಜೊತೆ ಸರಕಾರವಿದೆ ;ನಿಮ್ಮ ಸಂಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ , ಧೈರ್ಯವಾಗಿರಿ: ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಿಎಂ ಅಭಯ – vishwanews24

ಪ್ರಕರಣದ ತನಿಖೆಗಾಗಿ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಆ.23ರಂದು ಪೆರಂಪಳ್ಳಿ ಸಂತೋಷನಗರದಲ್ಲಿ ಅರುಣ್ ಮತ್ತು ಕೌಶಿಕ್‌ರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

23.56 ಲಕ್ಷ ಮೌಲ್ಯದ ಸೊತ್ತು ವಶ
ಆರೋಪಿಗಳಿಂದ 2 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ನೋಟುಗಳು, 1 ಕೆಜಿ 360 ಗ್ರಾಂ ಬೆಳ್ಳಿ ಆಭರಣಗಳು (2.86 ಲಕ್ಷ ರೂ.), 1.45 ಗ್ರಾಂ ಚಿನ್ನದ ನಾಣ್ಯಗಳು (22,500 ರೂ), 4 ಲಕ್ಷ ರೂ.ಮೌಲ್ಯದ ಆಟೋರಿಕ್ಷಾ, 33 ಸಾವಿರ ರೂ.ನಗದು, ಎರಡು ಮೊಬೈಲ್ ಫೋನ್‌ಗಳು (13 ಸಾವಿರ ರೂ.), 45 ಸಾವಿರ ರೂ.ಮೌಲ್ಯದ ಕಳವು ಮಾಡಿದ ಪಲ್ಸರ್ ಬೈಕ್, 30 ಸಾವಿರ ರೂ.ಮೌಲ್ಯದ ವಿದೇಶಿ ಕೈಗಡಿಯಾರ ಹಾಗೂ 88.400 ಗ್ರಾಂ ಚಿನ್ನ (13.26 ಲಕ್ಷ ರೂ.) ಸೇರಿದಂತೆ ಒಟ್ಟು 23,56,230 ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:

ಮೈಸೂರಿನಲ್ಲಿ ಕಂಬಳಕ್ಕೆ ಸಿದ್ಧತೆ : ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ – vishwanews24

ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐಪಿಎಸ್ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್‌ಐ ಪ್ರಕಾಶ್, ಸಿಬಂದಿಗಳಾದ ಪ್ರಸನ್ನ.ಸಿ., ಜೀವನ್‌ಕುಮಾರ್, ಕೃಷ್ಣದೇವಾಡಿಗ, ಆನಂದ ಗಾಣಿಗ, ಆನಂದ ಎಸ್., ಓಬಳೇಶ್ ಹಾಗೂ ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ, ಹೇಮಂತ್ ಕುಮಾರ್ ಮತ್ತು ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply