ಉಡುಪಿ ಶ್ರೀಕೃಷ್ಣ ಸನ್ನಿಧಿಯ ಸ್ವರ್ಣಾ ನದಿಯಲ್ಲಿ ಪವಿತ್ರ ಸ್ನಾನ, ಹರಿದುಬಂದ ಭಕ್ತಸಾಗರ -Vishwanews24

Featured, ಉಡುಪಿ

ಉಡುಪಿ :ಪ್ರಯಾಗ್‌ರಾಜ್‌ನಲ್ಲಿ ಯಶಸ್ವಿಯಾಗಿ ಕುಂಭಮೇಳ ಸಂಪನ್ನಗೊಳ್ಳುತ್ತಲೇ ಉಡುಪಿಯ ಸ್ವರ್ಣೆಯಲ್ಲಿ ನೂರಾರು ಮಂದಿ ಪವಿತ್ರ ತೀರ್ಥ ಸ್ನಾನಗೈದರು.

ಕೃಷ್ಣಾಂಗಾರಕ ಚತುರ್ದಶಿ ಪ್ರಯುಕ್ತ ಸಂಪ್ರದಾಯದಂತೆ ನಡೆದ ನದೀ ಸ್ನಾನದಲ್ಲಿ ಉಡುಪಿ ಮಾತ್ರವಲ್ಲದೇ ರಾಜ್ಯದ ಬೆಂಗಳೂರು ಮೈಸೂರು,  ಮಂಡ್ಯ, ಧಾರವಾಡ, ಹುಬ್ಬಳ್ಳಿ,  ಕಲಬುರ್ಗಿ, ಹಾವೇರಿ ಹಾಗೂ ತಮಿಳಿನಾಡು, ಆಂಧ್ರದ ಚಿತ್ತೂರು ಮೊದಲಾದ‌ ಕಡೆಗಳಿಂದಲೂ ಆಗಮಿಸಿ ಸ್ನಾನಗೈದರು.

ಉಡುಪಿಯಲ್ಲಿ  ಮೊಕ್ಕಾಂ ಇರುವ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದರು ತಮ್ಮ ಸುಮಾರು ಮುನ್ನೂರು ಮಂದಿ ಶಿಷ್ಯರೊಂದಿಗೆ ಮುಂಜಾನೆ 5.30 ಕ್ಕೆ ಆಗಮಿಸಿ ತೀರ್ಥಸ್ನಾನಗೈದು ಸ್ವರ್ಣೆಗೆ ಹಾಲೆರೆದು ಬಾಗಿನ ಒಪ್ಪಿಸಿ ಮಂಗಳಾರತಿ ಬೆಳಗಿದರು.

ಬಳಿಕ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥರು,  ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥರು ಆಗಮಿಸಿ ತೀರ್ಥಸ್ನಾನಗೈದರು. ಶಾಸಕ ಕೆ ರಘುಪತಿ ಭಟ್‌ ಭೇಟಿ ನೀಡಿ ದೇವರ ದರ್ಶನ ಪಡೆದರು.

ಕೃಷ್ಣ ಪಕ್ಷ, ಚತುರ್ದಶಿ, ಮಂಗಳವಾರ ಈ ಮೂರು ವಿಶೇಷಗಳು ಕೂಡಿ ಬಂದ ದಿನ ಕೃಷ್ಣಾಂಗಾರಕ ಚತುರ್ದಶಿ ಎಂದೇ ಪ್ರಸಿದ್ಧಿ ಪಡೆದಿದ್ದು, ಸ್ವರ್ಣೆಯಲ್ಲಿ ಗಂಗೆ ಈ ದಿನ ಸನ್ನಿಹಿತಳಾಗಿರುತ್ತಾಳೆ ಅನ್ನೋ ಕಾರಣಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಇಂತಹ ದಿನ ಉಡುಪಿಯ ಜೀವನದಿಯಾದ ಸ್ವರ್ಣಾ ನದಿಯಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪಗಳು ಕಳೆಯುತ್ತೆ ಅನ್ನೋದು ಪುರಾಣಗಳು ಹೇಳುವ ನಂಬಿಕೆ.

ಕ್ಷೇತ್ರದ ಅರ್ಚಕ ನವೀನ್‌ ಶಿವತ್ತಾಯ, ಉಸ್ತುವಾರಿ ಕೃಷ್ಣಮೂರ್ತಿ ಶಿವತ್ತಾಯ, ವಾಸುದೇವ ಭಟ್‌ ಪೆರಂಪಳ್ಳಿ, ನಾಗರಾಜ್‌ ಶಿವತ್ತಾಯ,  ಉತ್ತರಾದಿ ಮಠದ ವ್ಯವಸ್ಥಾಪಕ ಪ್ರಕಾಶ್‌ ಆಚಾರ್ಯ ಮೊದಲಾದವರು ಸಹಕರಿಸಿದರು.