ಉಡುಪಿ:ಮೀನುಗಾರಿಕಾ ಬೋಟ್‌ಗಳ ಡೀಸೆಲ್ ಮೇಲಿನ ರೋಡ್ ಸೆಸ್ ವಿನಾಯಿತಿಗಾಗಿ ಕೇಂದ್ರ ಹಣಕಾಸು ಸಚಿವರಿಗೆ ಮನವಿ : ಯಶ್‌ಪಾಲ್ ಸುವರ್ಣ -Vishwanews24

Featured, ಉಡುಪಿ

ಉಡುಪಿ:ಮೀನುಗಾರಿಕಾ ಬೋಟ್‌ಗಳ ಡೀಸೆಲ್ ಮೇಲಿನ ರೋಡ್ ಸೆಸ್ ವಿನಾಯಿತಿಗಾಗಿ ಕೇಂದ್ರ ಹಣಕಾಸು ಸಚಿವರಿಗೆ ಮನವಿ : ಯಶ್‌ಪಾಲ್ ಸುವರ್ಣ -Vishwanews24

ಉಡುಪಿ:ಮೀನುಗಾರಿಕಾ ಬೋಟ್‌ಗಳು ಬಳಸುವ ಡೀಸೆಲ್ ಮೇಲೆ ಕೇಂದ್ರ ಸರಕಾರ ವಿಧಿಸುತ್ತಿರುವ ರೋಡ್ ಸೆಸ್ ವಿನಾಯಿತಿ ನೀಡುವಂತೆ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್, ಕೇಂದ್ರ ಮೀನುಗಾರಿಕೆ ಸಚಿವರಾದ ಶ್ರೀ ಗಿರಿರಾಜ ಸಿಂಗ್, ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ, ರಾಜ್ಯ ಮೀನುಗಾರಿಕೆ ಸಚಿವರಾದ ಶ್ರೀ ಅಂಗಾರ ಹಾಗೂ ಕರಾವಳಿಯ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಹೆಗ್ಡೆ ಹಾಗೂ ಬಿ. ವೈ. ರಾಘವೇಂದ್ರ ರವರಿಗೆ ಮನವಿ ಸಲ್ಲಿಸಿರುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫಡರೇಷನ್ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಮೀನುಗಾರಿಕೆಯು ವಿದೇಶಿ ವಿನಿಮಯ, ಉದ್ಯೋಗಾವಕಾಶ ಹಾಗೂ ಪೌಷ್ಠಿಕಾಂಶವುಳ್ಳ ಆಹಾರದ ಪೂರೈಕೆಯ ಮೂಲಕ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿ ದೇಶದ ಜಿಡಿಪಿಗೆ ೫% ಕೊಡುಗೆ ನೀಡುತ್ತಿದೆ.

ಯಾಂತ್ರೀಕೃತ ಮೀನುಗಾರಿಕಾ ಬೋಟ್‌ಗಳು ಇಂಧನವಾಗಿ ಡೀಸೆಲನ್ನು ಬಳಸುತ್ತಿದ್ದು, ಈ ಡೀಸೆಲ್ ಮೇಲೆ ಸರಕಾರ ರೋಡ್ ಸೆಸ್ ವಿಧಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಡೀಸೆಲ್ ಬೆಲೆಯಲ್ಲಿ ಗಣನೀಯವಾಗಿ ಏರಿಕೆಗೊಂಡಿರುವ ಹಿನ್ನಲೆಯಲ್ಲಿ ಮೀನುಗಾರರು ಆರ್ಥಿಕವಾಗಿ ತೀರ ಸಂಕಷ್ಟಕ್ಕೀಡಾಗಿದ್ದಾರೆ.

ಈಗಾಗಲೇ ಕೇಂದ್ರ ಸರಕಾರ ಮೀನುಗಾರರ ಬಹುದಶಕಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಮೀನುಗಾರಿಕೆ ಇಲಾಖೆಯನ್ನು ರೂಪಿಸಿ ಆತ್ಮನಿರ್ಭರ ಯೋಜನೆಯ ಮೂಲಕ ಮೀನುಗಾರಿಕೆ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಸರಕಾರ ಸೂಕ್ತ ನಿರ್ಣಯ ತಳೆದು ಮೀನುಗಾರಿಕೆಗೆ ಬಳಸುವ ಡೀಸೆಲ್ ಮೇಲಿನ ರೋಡ್ ಸೆಸ್ ವಿನಾಯಿತಿ ನೀಡಲು ಕ್ರಮಕೈಗೊಳ್ಳುವ ಮೂಲಕ ಮೀನುಗಾರಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡುವಂತಾಗಲಿ ಎಂದುಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.