“ಎಚ್‌.ಡಿ.ದೇವೇಗೌಡ ಅವರು ಪ್ರಧಾನಿಯಾಗಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಬಗೆಹರಿಯುತ್ತಿತ್ತು : ಪೇಜಾವರ ಶ್ರೀ -Vishwanews24

Featured, ಉಡುಪಿ

ಉಡುಪಿ: “ಎಚ್‌.ಡಿ.ದೇವೇಗೌಡ ಅವರು ಪ್ರಧಾನಿಯಾಗಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಕೂಡ ಬಗೆಹರಿಯುತ್ತಿತ್ತು’ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ದೇವೇಗೌಡ ದಂಪತಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅನಂತರ ಉಡುಪಿ ಗೋವಿಂದ ಕಲ್ಯಾಣಮಂಟಪದಲ್ಲಿ ಜನ್ಮನಕ್ಷತ್ರ ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭ ಪೇಜಾವರ ಶ್ರೀಗಳು ಆಶೀರ್ವಚನ ನೀಡಿದರು.

“ದೇವೇಗೌಡ ಅವರು ಹಲವು ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಅವರು ರಾಜ್ಯದ ಪ್ರಾಮಾಣಿಕ, ಹೆಮ್ಮೆಯ ರಾಜಕಾರಣಿ. ಅವರು ಪ್ರಧಾನಿಯಾಗಿದ್ದಾಗ ಹೊಸದಿಲ್ಲಿಯಲ್ಲಿ ಮಠಕ್ಕೆಂದು ಒಂದು ಎಕರೆ ಜಾಗವನ್ನು ಕಡಿಮೆ ಬೆಲೆಗೆ ನೀಡಿದ್ದರು. ಅದರಲ್ಲಿ ಮಠ ಆಗಿದೆ. ಜುಲೈನಲ್ಲಿ ಸಂಶೋಧನಾ ಕೇಂದ್ರ ಆರಂಭಗೊಳ್ಳಲಿದೆ’ ಎಂದು ಶ್ರೀಗಳು ಹೇಳಿದರು. ದಂಪತಿಗೆ ಶ್ರೀಕೃಷ್ಣ ಪೂರ್ಣ ಅನುಗ್ರಹ ನೀಡಲಿ ಎಂದು ಹರಸಿದರು.

ಉಡುಪಿ ಶ್ರೀ ಗೋವಿಂದ ಕಲ್ಯಾಣಮಂಟಪದಲ್ಲಿ ವಿಶ್ವೇಶತೀರ್ಥ ಶ್ರೀಪಾದರ ಜನ್ಮ ನಕ್ಷತ್ರ ಸಮಾರಂಭದ ಪ್ರಯುಕ್ತ ಪೂಜೆಯಲ್ಲಿ ಪಾಲ್ಗೊಂಡ ದೇವೇಗೌಡ ದಂಪತಿ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಶ್ರೀಗಳು ಶಾಲು, ಹಾರ ಹಾಕಿ ಆಶೀರ್ವಚಿಸಿದರು.