ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ಮಾ.12ರಂದು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ; ಸಾರ್ವಜನಕರಿಗೆ ಕಷ್ಟ ಉಂಟು ಮಾಡುವ ಇಂತಹ ಕಾಯ್ದೆಯ ವಿರುದ್ಧವಾಗಿ ನಾವೆಲ್ಲರೂ ಹೋರಾಡಬೇಕು : ಸಸಿಕಾಂತ್ ಸೆಂಥಿಲ್ – Vishwanews24

Featured, ರಾಜ್ಯ ನ್ಯೂಸ್

ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ಮಾ.12ರಂದು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ; ಸಾರ್ವಜನಕರಿಗೆ ಕಷ್ಟ ಉಂಟು ಮಾಡುವ ಇಂತಹ ಕಾಯ್ದೆಯ ವಿರುದ್ಧವಾಗಿ ನಾವೆಲ್ಲರೂ ಹೋರಾಡಬೇಕು :

ಸಸಿಕಾಂತ್ ಸೆಂಥಿಲ್

ಬೆಂಗಳೂರು : ದೇಶದ ಜನರನ್ನು ಸಂದೇಹಾಸ್ಪದ ನಾಗರಿಕರನ್ನಾಗಿ ಮಾಡಲು ಹೊರಟಿರುವ ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಕಾಯ್ದೆಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಮಾ.12ರಂದು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಕೇಂದ್ರ ಸರ್ಕಾರದ ನೀತಿಗಳು ಕಷ್ಟಕ್ಕೆ ದೂಡಿದೆ. ಎನ್‌ಆರ್‌ಸಿಗೆ ಎನ್‌ಪಿಆರ್‌ ಕಾಯ್ದೆಯು ಪೂರಕವಾಗಿದೆ. ಎ.15 ರಿಂದ ಜನರ ಗಣತಿ ಆರಂಭಿಸುತ್ತಾರೆ. ಹುಟ್ಟಿದ ದಾಖಲೆ ಇಲ್ಲದವರನ್ನು ಸಂದೇಹಾಸ್ಪದ ನಾಗರಿಕರ ಸಾಲಿಗೆ ಸೇರಿಸುತ್ತಾರೆ. ಸಾರ್ವಜನಕರಿಗೆ ಕಷ್ಟ ಉಂಟು ಮಾಡುವ ಇಂತಹ ಕಾಯ್ದೆಯ ವಿರುದ್ಧವಾಗಿ ನಾವೆಲ್ಲರೂ ಹೋರಾಡಬೇಕು ಎಂದು ಹೇಳಿದರು.

ಎನ್‌ಆರ್‌ಪಿ ಹಾಗೂ ಎನ್‌ಆರ್‌ಸಿಯಲ್ಲಿ ಹಲವು ಲೋಪಗಳಿವೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕಾಯ್ದೆ ಇದಾಗಿದೆ. ಜನರಿಗೆ ತೊಂದರೆ ಉಂಟು ಮಾಡುವ ಈ ಕಾಯ್ದೆಯನ್ನು ಸಾರ್ವಜನಿಕವಾಗಿ ವಿರೋಧ ಮಾಡುತ್ತಿದ್ದೇವೆ. ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗ ಬೆಳಗ್ಗೆ 9 ರಿಂದ 6 ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಈ ಸತ್ಯಾಗ್ರಹದಲ್ಲಿ ವಿವಿಧ ಗ್ರಾಮಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದರು.