ಎಲ್ಲಾ ವಿಚಾರಣೆಯಿಂದ ಮುಕ್ತವಾದ ನಂತರವೇ ರಾಜಕೀಯ ಪ್ರವೇಶ : ರಾಬರ್ಟ್‌ ವಾದ್ರಾ – Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ:ನನ್ನ ವಿರುದ್ಧದ ಹಣ ಅಕ್ರಮಗಳ ಕೇಸುಗಳಲ್ಲಿ ಪರಿಶುದ್ಧನಾಗಿ ಮೂಡಿ ಬಂದ ಬಳಿಕವೇ ನಾನು ಸಕ್ರಿಯ ರಾಜಕಾರಣ ಪ್ರವೇಶಿಸುವೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಪತಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ, ರಾಬರ್ಟ್‌ ವಾದ್ರಾ ಹೇಳಿದ್ದಾರೆ.

“ನಾನು ಏನನ್ನೂ ಮುಚ್ಚಿಡಲು ಬಯಸುವುದಿಲ್ಲ; ನನ್ನ ಎಲ್ಲ ಕೆಲಸ ಕಾರ್ಯಗಳು ಕಾನೂನಿನ ಚೌಕಟ್ಟಿನೊಳಗೇ ಇವೆ; ನಾನು ಕಾನೂನಿನ ಪ್ರಕಾರ ನಡೆದುಕೊಳ್ಳುವವನು ಮತ್ತು ಏನನ್ನೂ ಅಡಗಿಸಿಡದವನು; ನನ್ನ ವಿರುದ್ಧದ ಸುಳ್ಳು ಕೇಸುಗಳಲ್ಲಿ ನಾನು ಪರಿಶುದ್ಧನಾಗಿ ಮೂಡಿ ಬರುವ ತನಕ ನಾನು ರಾಜಕಾರಣ ಪ್ರವೇಶಿಸುವುದಿಲ್ಲ; ಇದು ನನ್ನ ಆಶ್ವಾಸನೆ’ ಎಂದು ವಾದ್ರಾ ಹೇಳಿದರು.

ಇನ್ನು ಕಳೆದ ಡಿಸೆಂಬರ್ 7 ರಂದು ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ಅವರ ಮೇಲೆ ಐಟಿ ಮತ್ತು ಇಡಿ ದಾಳಿ ನಡೆದಿತ್ತು. ತನಿಖೆ ನಂತರ ಇಡಿಯು ವಾದ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿತ್ತು. ಲಂಡನ್‌ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್‌ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ರಾಬರ್ಟ್‌ ವಾದ್ರಾ ಲಂಡನ್‌ನಲ್ಲಿ ಮಿಲಿಯನ್ ಪೌಂಡ್ ಮೌಲ್ಯದ ಎಂಟು ಆಸ್ತಿಗಳ ಒಡೆತನ ಹೊಂದಿದ್ದಾರೆ ಎಂದು ಇಡಿ ಹೇಳಿದೆ. ಇದಕ್ಕೆ ಪ್ರತ್ಯುತ್ತರವಾಗಿ ವಾದ್ರಾ ತಮ್ಮ ಪತ್ನಿ ಮತ್ತು ತಮ್ಮ ಬಗ್ಗೆ, “ಪ್ರತಿಕಾರದ ಹಾಗೂ ಕ್ರೂರ ರಾಜಕೀಯ ವಾತಾವರಣವಿದೆ. ಆದರೆ ನನಗೆ ಗೊತ್ತು, ಜನರ ಸೇವೆ ಮಾಡಬೇಕಾಗಿರುವುದು ಆಕೆಯ ಕರ್ತ್ಯವ್ಯ, ಈಗ ಆಕೆಯನ್ನು ನಾವು ಜನರ ಕೈಗೆ ನೀಡುತ್ತಿದ್ದೇವೆ. ದಯವಿಟ್ಟು ಆಕೆಯನ್ನು ಸುರಕ್ಷಿತವಾಗಿಡಿ” ಎಂದು ಪತ್ನಿ ಪ್ರಿಯಾಂಕ ಗಾಂಧಿಯವರ ಕುರಿತು ಭಾವನಾತ್ಮಕ ಪತ್ರ ಬರದಿದ್ದ ರಾಬರ್ಟ್ ವಾದ್ರಾ, ನನ್ನ ಹೆಸರು ಎಲ್ಲಾ ವಿಚಾರಣೆಯಿಂದ ಮುಕ್ತವಾದ ನಂತರವಷ್ಟೇ ರಾಜಕೀಯ ಪ್ರವೇಶಿಸುತ್ತೇನೆ ಎಂದಿದ್ದಾರೆ.

ಕೇಂದ್ರ ಸರ್ಕಾರಕ್ಕೆ ನೇರ ನುಡಿಯಲ್ಲಿ ಪ್ರಶ್ನಿಸಿದ ಇವರು, ನಾನು ದೇಶದಲ್ಲೇ ಇದ್ದೇನೆ. ಈ ದೇಶದಲ್ಲಿ ಅದೆಷ್ಟೋ ವಾಣಿಜ್ಯೋದ್ಯಮಿಗಳು ಲೂಟಿ ಮಾಡಿ ಪಲಾಯನಗೈದಿದ್ದಾರೆ. ಅವರನ್ನು ದೇಶಕ್ಕೆ ವಾಪಸ್ ಕರೆತರುವ ಕೆಲಸ ಎಲ್ಲಿಯ ತನಕ ಬಂತು ಎಂದು ಕೇಳಿದ್ದಾರೆ.