ಎಸ್‌ಎಸ್‌ಎಲ್ ಸಿ ಮಂಡಳಿಯಲ್ಲಿ ಪಿಯು ವಿಲೀನ : ಡಿಸೆಂಬರ್‌ನಲ್ಲಿ ಅಸ್ತಿತ್ವ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಕರ್ನಾಟಕದಲ್ಲಿ ಎರಡು ಪರೀಕ್ಷಾ ಮಂಡಳಿಗಳು ವಿಲೀನಗೊಳ್ಳಲಿವೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗೆ ಏಕೈಕ ಮಂಡಳಿ ಡಿಸೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬರಲಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಸಚಿವ ಸುರೇಶ್‌ ಕುಮಾರ್‌ ಶುಕ್ರವಾರ ಈ ಘೋಷಣೆ ಮಾಡಿದ್ದು ಒಂದೇ ಮಂಡಳಿ ಈ ಸಮಯದ ಅಗತ್ಯ ಎಂದಿದ್ದಾರೆ.

ಸದ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕರ್ನಾಟಕ ಸೆಕೆಂಡರಿ ಎಜುಕೇಷನ್‌ ಎಕ್ಸಾಮಿನೇಷನ್‌ ಬೋರ್ಡ್‌ (ಕೆಎಸ್‌ಇಇಬಿ) ಮತ್ತು ಪಿಯು ಪರೀಕ್ಷೆಯನ್ನು ಪಿಯು ಶಿಕ್ಷಣ ಇಲಾಖೆ (ಡಿಪಿಯುಇ) ನಡೆಸುತ್ತಿದೆ. ಎರಡೂ ಮಂಡಳಿಗಳು ಹೆಚ್ಚು ಕಡಿಮೆ ಒಂದೇ ಮಾದರಿಯನ್ನು ಪರೀಕ್ಷೆಗೆ ಅನುಸರಿಸುತ್ತಿದ್ದರೂ ಎರಡೂ ಮಂಡಳಿಗಳು ಪ್ರತ್ಯೇಕವಾಗಿ ಒಂದಷ್ಟು ಕೋಟಿಗಳನ್ನು ಖರ್ಚು ಮಾಡುತ್ತಿವೆ.  ಈ ಹಿನ್ನೆಲೆಯಲ್ಲಿ 2017ರಲ್ಲಿ ಅಂದಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಎರಡೂ ಪರೀಕ್ಷೆಗಳಿಗೆ ಒಂದೇ ಮಂಡಳಿಯನ್ನು ಜಾರಿಗೆ ತರುವ ಪ್ರಸ್ತಾಪ ಇಟ್ಟಿದ್ದರು.

ಮುಂದಿನ ದಿನಗಳಲ್ಲಿ “ಪಿಯು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಸೆಕೆಂಡರಿ ಎಜುಕೇಷನ್‌ ಬೋರ್ಡ್‌ ನಡೆಸಲಿದೆ. ಎರಡರಲ್ಲೂ ಒಂದೇ ಪರೀಕ್ಷಾ ಪ್ರಕ್ರಿಯೆ ಮತ್ತು ಪದ್ಧತಿ ಇರಲಿದೆ. ಸೆಕೆಂಡರಿ ಪರೀಕ್ಷಾ ಮಂಡಳಿಯ ನಿರ್ದೇಶಕರ ಅಡಿಯಲ್ಲಿ ಇವು ಬರಲಿವೆ,” ಎಂಬುದಾಗಿ ಪಿಯು ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌ಆರ್‌ ಉಮಾಶಂಕರ್‌ ವಿವರ ನೀಡಿದ್ದಾರೆ.

ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶುಕ್ರವಾರ ನಡೆದ ಶಿಕ್ಷಣ ಅಧಿಕಾರಿಗಲ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಕರ್ನಾಟಕ ಮಾಧ್ಯಮಿಕ ಶಾಲಾ ಪರೀಕ್ಷಾ ಮಂಡಳಿಯೇ ಎಸ್‌ಎಸ್‌ಎಲ್ ಸಿ ಮತ್ತು ಪಿಯು ಪರೀಕ್ಷೆಗಳನ್ನು ನಡೆಸಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಸಚಿವ ಸುರೇಶ್, ಸಭೆಯಲ್ಲಿ ಎರಡೂ ಮಂಡಳಿಗಳನ್ನು ವಿಲೀನಗೊಳಿಸುವ ಪ್ರಸ್ತಾವದ ಬಗ್ಗೆ ಚರ್ಚೆ ನಡೆದಿದೆ. ನಾವು ಇದರ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಿದ್ದೇವೆ. ಎರಡೂ ಮಂಡಳಿಗಳನ್ನು ವಿಲೀನಗೊಳಿಸುವ ಸಲುವಾಗಿ ಈಗಾಗಲೇ 50 ಕೋಟಿ ರೂ. ಅನ್ನು ತೆಗೆದಿರಿಸಲಾಗಿದ್ದು, ಎರಡೂ ಇಲಾಖೆಗಳಿಗೆ ಇದರಿಂದ ಹಣ ಉಳಿತಾಯವಾಗಲಿದೆ ಎಂದರು.