ಕಂಬಳ ಹಿಂದೆ ಬಿದ್ದಿರುವ ಪೇಟಾ , ಕಂಬಳದಲ್ಲಿ ನಡೆದಿರುವ ಹಿಂಸೆ ಬಗ್ಗೆ ತನಿಖಾ ವರದಿ ಸುಪ್ರೀಂ ಗೆ ಸಲ್ಲಿಕೆ -Vishwanews24
ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳ ಹಿಂದೆ ಬಿದ್ದಿರುವ ಪೇಟಾ ಈಗ ಮತ್ತೆ ಸುಪ್ರೀಂಕೋರ್ಟ್ ಕದ ತಟ್ಟಿದೆ. ಕಳೆದ ಕಂಬಳ ಋುತುವಿನಲ್ಲಿ ನಡೆದ ಕಂಬಳದಲ್ಲಿ ಹಿಂಸೆ ನಡೆದಿರುವ ಬಗ್ಗೆ ತನಿಖಾ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವುದಾಗಿ ಪೇಟಾ ತಿಳಿಸಿದೆ.
ಪೆಟಾ ಕಳೆದ ವರ್ಷ ಡಿಸೆಂಬರ್ ಮತ್ತು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ನಡೆದ ಬಾರಾಡಿಬೀಡು, ಮೂಡುಬಿದಿರೆ, ಮಂಗಳೂರು ಮತ್ತು ತಿರುವೈಲ್ನಲ್ಲಿ ನಡೆದಿರುವ ಕಂಬಳಗಳಲ್ಲಿ ತಪಾಸಣೆ ಮಾಡಿದ್ದು, ಕೋಣಗಳ ಮೇಲಿನ ಹಿಂಸೆ ಮತ್ತು ಕೌರ್ಯವನ್ನು ತಡೆಯಲು ಕರ್ನಾಟಕದ ಕಂಬಳಗಳು ವಿಫಲವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ತುಳುನಾಡಿನ ಪ್ರಸಿದ್ಧ ಕಂಬಳ ಮತ್ತೊಮ್ಮೆ ಆಚರಣೆಗೆ ಬಂದಿದ್ದು, ಕೆಲವು ವಾರಗಳ ಹಿಂದಷ್ಟೇ ಮಂಗಳೂರಿನ ವಿವಿಧ ಕಡೆ ನಡೆಯುವ ಕಂಬಳದ ದಿನಾಂಕ, ಸ್ಥಳ ಸೇರಿ ವೇಳಾ ಪಟ್ಟಿ ಪ್ರಕಟವಾಗಿತ್ತು.
1960ರ ಪ್ರಾಣಿ ಹಿಂಸೆ ತಡೆ ಕಾಯಿದೆ ಪ್ರಕಾರ ಪ್ರಾಣಿಯನ್ನು ಹಿಂಸಿಸುವುದು ನಿಷೇಧಿಸಲಾಗಿದ್ದು, ಯಾವುದೇ ರೀತಿಯಲ್ಲಿ ಪ್ರಾಣಿಗಳಿಗೆ ನೋವು ಮಾಡುವುದನ್ನು ಕಾಯಿದೆ ವಿರೋಧಿಸುತ್ತದೆ. ಪ್ರಾಣಿಗಳನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕೆಂಬ ನಿಯಮವಿದೆ. ಆದರೆ ಬರದಿ ಬೀಡಿನ ಕಂಬಳದಲ್ಲಿ ಕೋಣಕ್ಕೆ ಹಿಂಸಿಸಲಾಗುತ್ತದೆ ಎಂದು ಆರೋಪಿಸಿ, ಪೆಟಾ ವಿರೋಧ ವ್ಯಕ್ತಪಡಿಸಿದೆ. ಪೆಟಾ ನಡೆಗೆ ತುಳು ನಾಡಿನ ಮಂದಿಯೂ ಸೋಷಿಯಲ್ ಮೀಡಿಯಾದಲ್ಲಿ ವಿಧವಿಧವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೆಟಾ ಇಂಡಿಯಾದಿಂದ ತಪಾಸಣೆ ಮಾಡಲಾದ ಎಲ್ಲ 4 ಕಂಬಳಗಳಲ್ಲಿ ಕಂಬಳ ಓಟದ ಸ್ಪರ್ಧೆಗೆ ಅನುವು ಮಾಡಿಕೊಡುವ ರಾಜ್ಯದ ತಿದ್ದುಪಡಿಗಳು ಕೋಣಗಳನ್ನು ಹಿಂಸೆಯಿಂದ ರಕ್ಷಿಸುವಲ್ಲಿ ಎಷ್ಟು ಅನುಪಯುಕ್ತ ಎನ್ನುವುದನ್ನು ಎತ್ತಿ ತೋರಿಸುತ್ತದೆ.
ಪೆಟಾ ದಾಖಲು ಮಾಡಿರುವ ದೂರು ಕರ್ನಾಟಕದ ಹೊಸ ಕಾನೂನಿನ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುತ್ತದೆ ಮತ್ತು ಅದನ್ನು ಕಿತ್ತು ಹಾಕಲು ನಿರ್ದೇಶನವನ್ನು ಕೋರುತ್ತದೆ ಎಂದು ಪೆಟಾದ ಪ್ರಕಟನೆ ತಿಳಿಸಿದೆ.
