ಕಟೀಲು ಮೇಳ ಪ್ರಕರಣ : ವಿವಾದ ಸೌಹಾರ್ದ ಪರಿಹಾರ ಆವಶ್ಯ, ಅಗತ್ಯ ಬಿದ್ದರೆ ಸರಕಾರ ಮಧ್ಯ ಪ್ರವೇಶ : ಕೋಟ ಶ್ರೀನಿವಾಸ ಪೂಜಾರಿ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕಟೀಲು ಮೇಳದ ಪ್ರಕರಣ ಸಂಬಂಧಿಸಿ ಎರಡು ತಂಡಗಳ ನಡುವೆ ಸಮನ್ವಯ ಸಾಧಿಸಿ ಸೌಹಾರ್ದದಿಂದ ಇತ್ಯರ್ಥವಾಗುವ ಆವಶ್ಯಕತೆಯಿದೆ. ಅಗತ್ಯ ಬಿದ್ದರೆ ಸರಕಾರ ಮಧ್ಯ ಪ್ರವೇಶಿಸುತ್ತದೆ ಎಂದು ಸಚಿವ ಕೋಟ ಹೇಳಿದ್ದಾರೆ.

ಮೇಳಕ್ಕೆ ಸಂಬಂಧಪಟ್ಟ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಬಗ್ಗೆ ನಡೆಯುತ್ತಿರುವ ಚರ್ಚೆ, ಮಾಧ್ಯಮ ವರದಿಗಳು ಮತ್ತು ಕಲಾಸಕ್ತರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವನಾಗಿ ಪೂರ್ಣ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೆ; ಅವರು ಸಲ್ಲಿಸಿದ್ದಾರೆ. ಅದನ್ನು ಸರಕಾರ ಕೂಲಂಕಷವಾಗಿ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ. ಈ ಸಮಸ್ಯೆ ಸೌಹಾರ್ದಯುತವಾಗಿ ಪರಿಹಾರ ಕಾಣಬೇಕು ಎಂಬುದು ನನ್ನ ಇಚ್ಛೆ ಎಂದರು.

ಸರಕಾರ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದೆ. ಆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ಮುಂದೆ ಇಂತಹ ಸಮಸ್ಯೆಗಳು ಬಾರದಂತೆ ಕ್ರಮ ಕೈಗೊಳ್ಳಬೇಕಿದೆ. ಕೆಲವು ಘಟನೆಗಳಿಗೆ ಪ್ರತಿಕ್ರಿಯಿಸದೆ ಸಮಸ್ಯೆ ಪರಿಹರಿಸುವುದಕ್ಕೆ ಪ್ರಯತ್ನಿಸುವುದು ಹೆಚ್ಚು ಸೂಕ್ತ ಎಂದರು.

ಸಾಮೂಹಿಕ ವಿವಾಹಕ್ಕೆ ಸಿದ್ಧತೆ
“ಎ’ ಗ್ರೇಡ್‌ ಮುಜರಾಯಿ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಸಚಿವ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ವರನಿಗೆ ಪ್ರೋತ್ಸಾಹ ಧನವಾಗಿ 5 ಸಾವಿರ ರೂ., ವಧುವಿಗೆ 10 ಸಾವಿರ ಮತ್ತು 40 ಸಾವಿರ ರೂ. ಬೆಲೆ ಬಾಳುವ ಚಿನ್ನದ ತಾಳಿ, ಅಂದಾಜು 8 ಗ್ರಾಂ ತೂಕದ ಎರಡು ಚಿನ್ನದ ಗುಂಡು ನೀಡಲಾಗುತ್ತದೆ. ಇದನ್ನು ದೇವಾಲಯದ ನಿಧಿಯಿಂದ ಭರಿಸಲಾಗುವುದು. ಸಾಮೂಹಿಕ ವಿವಾಹಕ್ಕಾಗಿ 2020ರ ಎ. 26 ಮತ್ತು ಮೇ 24 ಇವುಗಳಲ್ಲಿ ಒಂದು ದಿನಾಂಕವನ್ನು ನಿಗದಿಪಡಿಸಬೇಕು ಎಂದು ಸೂಚಿಸಿದರು.

ಸಾಮೂಹಿಕ ವಿವಾಹಕ್ಕೆ 30 ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ವಿವಾಹ ನಡೆಯುವ ಸ್ಥಳದಲ್ಲೇ ಅಧಿಕಾರಿಗಳು ಇದ್ದು ವಿವಾಹ ನೋಂದಣಿ ಮಾಡಿಸಬೇಕು. ಪ್ರೋತ್ಸಾಹ ಧನವನ್ನು ವಧೂವರರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗುವುದು. ಜಿಲ್ಲಾಧಿಕಾರಿಗಳು ಮೇಲುಸ್ತುವಾರಿ ವಹಿಸಿಕೊಂಡು ಕಾರ್ಯಕ್ರಮ ಅನುಷ್ಠಾನಿಸಬೇಕು ಎಂದರು.