ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಲಲಿತಾ ಪಂಚಮಿ ಪ್ರಯುಕ್ತ 18 ಸಾವಿರ ದೇವರ ಶೇಷ ವಸ್ತ್ರ ವಿತರಣೆ -Vishwanews24

Featured, ದಕ್ಷಿಣ ಕನ್ನಡ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಲಲಿತಾ ಪಂಚಮಿ ಪ್ರಯುಕ್ತ ಗುರುವಾರ ರಾತ್ರಿ ಅನ್ನಪ್ರಸಾದ ಸ್ವೀಕರಿಸಿದ ಸುಮಾರು 18 ಸಾವಿರ ಮಹಿಳಾ ಭಕ್ತರಿಗೆ ದೇವರ ಶೇಷ ವಸ್ತ್ರ ನೀಡಲಾಯಿತು.,

ಸಂಜೆ 6.30ಕ್ಕೆ ಅನ್ನಪ್ರಸಾದ ವಿತರಣೆ ಪ್ರಾರಂಭವಾಗಿದ್ದು, ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 18 ಸಾವಿರ ಶೇಷವಸ್ತ್ರ ಸಿದ್ಧಪಡಿಸಲಾಗಿದ್ದು, ತಡರಾತ್ರಿಯವರೆಗೂ ವಿತರಣೆ ಕಾರ್ಯ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಸುಮಾರು 30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಅನ್ನಪ್ರಸಾದ ಹಾಗೂ ಶೇಷವಸ್ತ್ರ ಪಡೆಯಲು ಸಮರ್ಪಕ ಸರದಿಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಬಸ್‌ ನಿಲ್ದಾಣ ಪರಿಸರ, ಕುದುರು ಪ್ರದೇಶ ಹಾಗೂ ಸೇತುವೆಯ ಮೇಲೆ ಪ್ರತ್ಯೇಕ ಸಾಲುಗಳಿದ್ದವು. ದೇವರ ದರ್ಶನ ಹಾಗೂ ಅನ್ನಪ್ರಸಾದ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಭದ್ರತಾ ವ್ಯವಸ್ಥೆಗೆ 100 ಪೊಲೀಸರನ್ನು ನಿಯೋಜಿಸಲಾಗಿತ್ತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದ 300 ಮಂದಿ ಸ್ವಯಂ ಸೇವಕರಿದ್ದರು. 30 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರು ಗುತ್ತು, ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ , ಸುಧೀರ್‌ ಶೆಟ್ಟಿ ಕೊಡೆತ್ತೂರು ಗುತ್ತು, ಬಿಪಿನ್‌ ಚಂದ್ರ ಶೆಟ್ಟಿ, ದೇವಸ್ಥಾನದ ಪ್ರಬಂಧಕ ತಾರಾನಾಥ ಶೆಟ್ಟಿ, ಭೋಜನ ಶಾಲೆಯ ವ್ಯವಸ್ಥಾಪಕ ರಘುನಾಥ ಶೆಟ್ಟಿ ಉಪಸ್ಥಿತರಿದ್ದರು.