ಕನ್ನಡದ ಕೋಟ್ಯಧಿಪತಿ’ ಹಾಟ್ ಸೀಟಲ್ಲಿ ಬಿಜೆಪಿ ನಾಯಕರು -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಈ ಬಾರಿ  ಬಿಜೆಪಿಯ ಯಂಗ್ ಲೀಡರ್ಸ್ ಇಬ್ಬರು ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಪುನೀತ್ ಜತೆ ಜಂಟಿಯಾಗಿ ಕೋಟ್ಯಾಧಿಪತಿ ಆಡಲಿದ್ದಾರೆ.

 ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ನೇತೃತ್ವದಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಭಾಗಿಯಾಗಿದ್ದಾರೆ. ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಅವರ ಎಪಿಸೋಡ್ ಈ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ.

ಕನ್ನಡದ ಕೋಟ್ಯಧಿಪತಿ ಸಾಮಾನ್ಯ ಜನರ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಒಂದಿಷ್ಟು ಹಣವನ್ನು ಗೆದ್ದು ಕಷ್ಟದಿಂದ ಕೊಂಚ ದೂರ ಆಗಬಹುದು ಎನ್ನುವುದು ಜನರ ಆಸೆ. ಸಾಮಾನ್ಯ ಜನರ ಜೊತೆಗೆ ವಿಶೇಷ ಸಂಚಿಕೆಗಳಲ್ಲಿ ಸೆಲೆಬ್ರಿಟಿಗಳು ಭಾಗಿಯಾಗಿ ಗೆದ್ದ ಹಣವನ್ನು ಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತಾರೆ. ಈ ಬಾರಿ ಕನ್ನಡದ ಕೋಟ್ಯಧಿಪತಿಯಲ್ಲಿ ಬಿಜೆಪಿಯ ಯಂಗ್ ಲೀಡರ್ಸ್ ಇಬ್ಬರು ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಿಜೆಪಿಯ ಈ ಇಬ್ಬರು ನಾಯಕರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಪ್ರವಾಹ ಸಂತ್ರಸ್ತರಿಗಾಗಿ ಆಡುತ್ತಿದ್ದಾರೆ. ಪ್ರವಾಹದಲ್ಲಿ ಕೊಚ್ಚಿಹೋದ ಕನಸುಗಳಿಗೆ ಜೀವ ತುಂಬಲು ಇವರಿಬ್ಬರು ಹಾಟ್ ಸೀಟಿನಲ್ಲಿ ಕುಳಿತು ಪವರ್ ಸ್ಟಾರ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಉಂಟಾದ ಬೀಕರ ಪ್ರವಾಹದಿಂದ ಬದುಕು ಕಳೆದುಕೊಂಡವರ ಕಷ್ಟಕ್ಕೆ ನೆರವಾಗಲು ಇಬ್ಬರು ಹಟ್ ಸೀಟ್ ಏರಿದ್ದಾರೆ. ಇಲ್ಲಿ ಗೆದ್ದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದಾರೆ.

ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಇಬ್ಬರು ಕೋಟ್ಯಧಿಪತಿ ವೇದಿಕೆಗೆ ಎಂಟ್ರಿ ಕೊಡುವ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಜವಾಬ್ದಾರಿಯುತ ಕೆಲಸದ ಬಗ್ಗೆಯೂ ಮಾತನಾಡಿದ್ದಾರೆ. ಜನ ಪ್ರೀತಿ, ವಿಶ್ವಾಸ, ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಜನರಿಗೆ ನಂಬಿಕೆ ಉಳಿಸಿಕೊಳ್ಳಲು ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತಿರುವುದಾಗಿ ಹೇಳಿದ್ದಾರೆ.